ADVERTISEMENT

ಗೋಧ್ರಾ ನಂತರದ ಗಲಭೆ: 131 ಸಾಕ್ಷಿಗಳ ಭದ್ರತೆ ವಾಪಸ್ 

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2023, 16:25 IST
Last Updated 29 ಡಿಸೆಂಬರ್ 2023, 16:25 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಅಹಮದಾಬಾದ್: 2002ರ ಗೋಧ್ರಾ ಘಟನೆಯ ನಂತರದ ಗಲಭೆಗಳಿಗೆ ಸಂಬಂಧಿಸಿದ ಪ್ರಕರಣಗಳ ಎಲ್ಲ 131 ಸಾಕ್ಷಿಗಳಿಗೆ ನೀಡಿದ್ದ ಭದ್ರತೆಯನ್ನು ಸುಪ್ರೀಂ ಕೋರ್ಟ್‌ ನೇಮಿಸಿದ ವಿಶೇಷ ತನಿಖಾ ಸಂಸ್ಥೆ (ಎಸ್‌ಐಟಿ) ಹಿಂಪಡೆದಿದೆ.  ಗುಜರಾತ್‌ ಸರ್ಕಾರದ ಜತೆ ಸಮಾಲೋಚನೆ ನಡೆಸಿ ಡಿಸೆಂಬರ್‌ 13 ರಂದು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಎಸ್‌ಐಟಿ ಅಧಿಕಾರಿಗಳು ಹೇಳಿದ್ದಾರೆ. 

ಗೋಧ್ರಾ ಗಲಭೆಯ ನಂತರ ನಡೆದಿದ್ದ ಹತ್ಯಾಕಾಂಡ ಪ್ರಕರಣಗಳ ಕುರಿತು ತನಿಖೆಗೆ ಸುಪ್ರೀಂ ಕೋರ್ಟ್‌, ಎಸ್‌ಐಟಿ ನೇಮಕ ಮಾಡಿತ್ತು.  ಸಾಕ್ಷಿಗಳು ಮಾತ್ರವಲ್ಲದೆ ಇಬ್ಬರು ವಕೀಲರು ಮತ್ತು ನರೋದಾ ಪಾಟಿಯಾ ಪ್ರಕರಣದ ತೀರ್ಪು ನೀಡಿದ್ದ ವಿಶ್ರಾಂತ ನ್ಯಾಯಾಧೀಶರಾದ ಜ್ಯೋತ್ಸ್ನಾ ಯಾಗ್ನಿಕ್‌ ಅವರಿಗೆ ಭದ್ರತೆ ನೀಡಲಾಗುತ್ತಿತ್ತು.

ADVERTISEMENT


‘ಸಾಕ್ಷಿಗಳಿಗೆ ಯಾವುದೇ ಬೆದರಿಕೆಯಿಲ್ಲ ಎಂಬುದು ಖಚಿತವಾಗಿರುವ ಕಾರಣ ನಾವು ಭ‌ದ್ರತೆಯನ್ನು ಹಿಂಪಡೆದಿದ್ದೇವೆ. ಅವರಲ್ಲಿ ಯಾರೂ ಇದುವರೆಗೆ ಬೆದರಿಕೆ ಎದುರಿಸಿಲ್ಲ’ ಎಂದು ಎಸ್‌ಐಟಿ ಅಧಿಕಾರಿ ಎ.ಕೆ ಮಲ್ಹೋತ್ರ ತಿಳಿಸಿದರು.  

131 ಸಾಕ್ಷಿಗಳ ಭದ್ರತೆಗಾಗಿ 156 ಪೊಲೀಸರು ಮತ್ತು ಸಿಐಎಸ್‌ಎಫ್‌ನ 98 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಎಸ್‌ಐಟಿ ಇದಕ್ಕೂ ಮುನ್ನ 25 ಸಾಕ್ಷಿಗಳಿಗೆ ನೀಡಿದ್ದ ಭದ್ರತೆಯನ್ನು 2021ರ ಆಗಸ್ಟ್‌ನಲ್ಲಿ ವಾಪಸ್‌ ಪಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.