ADVERTISEMENT

ಈರುಳ್ಳಿ ಬೆಲೆ ಏರಿಕೆ:  ರಫ್ತು ನಿಷೇಧಿಸಿದ ಕೇಂದ್ರ ಸರ್ಕಾರ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2019, 13:20 IST
Last Updated 29 ಸೆಪ್ಟೆಂಬರ್ 2019, 13:20 IST
ಈರುಳ್ಳಿ
ಈರುಳ್ಳಿ   

ನವದೆಹಲಿ: ಹಲವಾರು ರಾಜ್ಯಗಳಲ್ಲಿ ಪ್ರವಾಹವುಂಟಾದ ಕಾರಣ ದೇಶದಲ್ಲಿಈರುಳ್ಳಿ ಉತ್ಪಾದನೆ ಕುಸಿದಿದೆ. ಮಾರುಕಟ್ಟೆಯಲ್ಲಿ ಈರುಳ್ಳಿ ಅಭಾವವುಂಟಾಗಿದ್ದು ಬೆಲೆಯೂ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಭಾನುವಾರ ಈರುಳ್ಳಿ ರಫ್ತು ನಿಷೇಧಿಸಿದೆ.

ಕಳೆದ ಕೆಲವು ವಾರಗಳಲ್ಲಿ ದೆಹಲಿ ಸೇರಿದಂತೆ ಹಲವಾರು ನಗರಗಳಲ್ಲಿ ಈರುಳ್ಳಿ ಬೆಲೆ ಎರಡು ಪಟ್ಟು ಏರಿಕೆಯಾಗಿದೆ. ಅತೀ ಹೆಚ್ಚು ಈರುಳ್ಳಿ ರಫ್ತು ಮಾಡುವ ದೇಶವಾಗಿದೆ ಭಾರತ.

ದೇಶದಾದ್ಯಂತ ಈರುಳ್ಳಿ ಅಭಾವವಿರುವುದರಿಂದ ಎಲ್ಲ ರೀತಿಯ ಈರುಳ್ಳಿಯ ರಫ್ತು ನಿಷೇಧಿಸಲಾಗಿದೆ. ಈ ನಿಷೇಧ ತಕ್ಷಣವೇ ಜಾರಿಯಾಗಲಿದೆ ಎಂದು ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ ಹೇಳಿದೆ.

ಈ ತಿಂಗಳ ಆರಂಭದಲ್ಲಿ ವಿದೇಶಿ ವ್ಯಾಪಾರ ನಿರ್ದೇಶನಾಲಯವು ಟನ್ ಈರುಳ್ಳಿ ರಫ್ತು ಮೇಲೆ850 ಡಾಲರ್ ಕನಿಷ್ಠ ರಫ್ತು ದರ (ಎಂಇಪಿ) ಹೇರಿತ್ತು. ಈರುಳ್ಳಿ ಅಭಾವ ತಲೆದೋರುತ್ತಿದ್ದಂತೆ ತಾತ್ಕಾಲಿಕ ಸಂಗ್ರಹದಿಂದ ಈರುಳ್ಳಿ ಹೊರತೆಗೆದಿತ್ತು.

ದೆಹಲಿ ಸೇರಿದಂತೆ ಹಲವಾರು ನಗರಗಳಲ್ಲಿ ಈರುಳ್ಳಿ ಬೆಲೆ 60-80 ಆಗಿದೆ. ಹರ್ಯಾಣ, ಆಂಧ್ರ ಪ್ರದೇಶ, ತ್ರಿಪುರಾ ಮತ್ತು ಒಡಿಶಾದಲ್ಲಿಈರುಳ್ಳಿಗೆ ಭಾರೀ ಅಭಾವವಿದ್ದು ಕೇಂದ್ರ ಸರ್ಕಾರದ ಸಂಗ್ರಹದಿಂದ ಹೆಚ್ಚಿನ ಈರುಳ್ಳಿ ಬಿಡುಗಡೆ ಮಾಡುವಂತೆ ಇಲ್ಲಿನ ಸರ್ಕಾರಗಳು ಒತ್ತಾಯಿಸಿವೆ. ಎಷ್ಟು ಈರುಳ್ಳಿ ಬೇಕು ಎಂಬುದರ ಬಗ್ಗೆ ನಿರ್ದಿಷ್ಟ ಮಾಹಿತಿ ನೀಡಬೇಕು ಎಂದು ಕೇಂದ್ರ ಸರ್ಕಾರ ಅಲ್ಲಿನ ರಾಜ್ಯ ಸರ್ಕಾರಗಳಿಗೆ ಹೇಳಿದೆ.
ಅದೇ ವೇಳೆ ಕೇಂದ್ರ ಸರ್ಕಾರದ ಸಂರ್ಗಹದಲ್ಲಿರುವ ಈರುಳ್ಳಿ ಸದ್ಯದ ಪರಿಸ್ಥಿತಿ ನಿಭಾಯಿಸಲು ಸಾಕಾಗವಷ್ಟು ಇದೆ ಎಂದು ಮಂಗಳವಾರ ಕೇಂದ್ರ ಸರ್ಕಾರ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.