ಲಖನೌ: ಜನರು ಮುಕ್ತವಾಗಿ ಈದ್ ಆಚರಿಸಲು ಬಿಜೆಪಿ ಸರ್ಕಾರ ಅಡೆತಡೆಗಳನ್ನು ಸೃಷ್ಟಿಸುತ್ತಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
ಲಖನೌದ ಐಶ್ಬಾಗ್ ಈದ್ಗಾದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆಡಳಿತ ಪಕ್ಷವು ಸಂವಿಧಾನವನ್ನು ಉಲ್ಲಂಘಿಸುತ್ತಿದೆ ಮತ್ತು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದೆ. ಬಿಜೆಪಿ ಸರ್ಕಾರ ಸಂವಿಧಾನದ ಪ್ರಕಾರ ದೇಶವನ್ನು ನಡೆಸುತ್ತಿಲ್ಲ. ಜನರು ಈದ್ ಅನ್ನು ಮುಕ್ತವಾಗಿ ಆಚರಿಸಲು ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈದ್ಗಾಗಳು ಮತ್ತು ಮಸೀದಿಗಳಲ್ಲಿ ಪೊಲೀಸ್ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದೆ. ಇದು ಅನಗತ್ಯವಾಗಿದೆ’ ಎಂದು ಅಖಿಲೇಶ್ ಹೇಳಿದ್ದಾರೆ.
‘ನೀವೆಲ್ಲರೂ ವರ್ಷಗಳಿಂದ ಈದ್ ಸಂಭ್ರಮಾಚರಣೆಯ ವರದಿ ಮಾಡುತ್ತಿದ್ದೀರಿ. ಆದರೆ, ನೀವು ಎಂದಾದರೂ ಇಷ್ಟು ದೊಡ್ಡ ಪ್ರಮಾಣದ ಬ್ಯಾರಿಕೇಡ್ಗಳನ್ನು ನೋಡಿದ್ದೀರಾ?’ ಎಂದು ಸುದ್ದಿಗಾರರನ್ನು ಕೇಳಿದರು.
ಯಾವುದೇ ಸೂಕ್ತ ಕಾರಣವಿಲ್ಲದೆ ಪೊಲೀಸರು ಉದ್ದೇಶಪೂರ್ವಕವಾಗಿ ಅರ್ಧ ಗಂಟೆಗಳ ಕಾಲ ನಮ್ಮ ಬೆಂಗಾವಲು ಪಡೆಯನ್ನು ತಡೆದರು. ನನ್ನನ್ನು ಏಕೆ ತಡೆಹಿಡಿಯಲಾಗಿದೆ ಎಂದು ನಾನು ಕೇಳಿದಾಗ, ಯಾವ ಅಧಿಕಾರಿಯ ಬಳಿಯೂ ಉತ್ತರವಿರಲಿಲ್ಲ. ಇದನ್ನು ಏನೆಂದು ಕರೆಯಬೇಕು? ಸರ್ವಾಧಿಕಾರ?, ಅಘೋಷಿತ ತುರ್ತು ಪರಿಸ್ಥಿತಿ? ಅಥವಾ ಇತರ ಸಮುದಾಯಗಳ ಕಾರ್ಯಕ್ರಮಗಳಿಗೆ ನಾವು ಹಾಜರಾಗದಂತೆ ನಮ್ಮನ್ನು ಬೆದರಿಸುವ ಪ್ರಯತ್ನವೇ? ಎಂದು ಅಖಿಲೇಶ್ ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.