ನವದೆಹಲಿ: ಸಂಸದರ ವೇತನವನ್ನು ಒಂದು ವರ್ಷದ ಅವಧಿಗೆ ಶೇ 30ರಷ್ಟು ಇಳಿಕೆ ಮಾಡುವುದು, ಕೋವಿಡ್ ಸೇನಾನಿಗಳ ಮೇಲೆ ಹಲ್ಲೆ ನಡೆಸಿದವರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವ ಮಸೂದೆ ಸೇರಿದಂತೆ 23 ಮಹತ್ವದ ಮಸೂದೆಗಳಿಗೆಸಂಸತ್ ಮುಂಗಾರು ಅಧಿವೇಶನದಲ್ಲಿ ಅಂಗೀಕಾರ ಪಡೆಯಲು ಕೇಂದ್ರ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.
2020ರ ಏಪ್ರಿಲ್ 1ರಿಂದ ಜಾರಿಯಾಗುವಂತೆ ಸಂಸದರ ವೇತನವನ್ನು ಶೇ 30ರಷ್ಟು ಇಳಿಸುವ ‘ಸಂಸದರ ವೇತನ, ಭತ್ಯೆ ಮತ್ತು ಪಿಂಚಣಿ (ತಿದ್ದುಪಡಿ) ಮಸೂದೆ–2020’, ಆರೋಗ್ಯ ಸೇವಾ ಕಾರ್ಯದಲ್ಲಿ ತೊಡಗಿದವರ ಮೇಲೆ ಹಲ್ಲೆ ನಡೆಸುವವರಿಗೆ ಮತ್ತು ಆಸ್ತಿಪಾಸ್ತಿಗೆ ಹಾನಿ ಉಂಟುಮಾಡುವವರಿಗೆ ಕನಿಷ್ಠ 3 ತಿಂಗಳಿಂದ 7ವರ್ಷಗಳ ಅವಧಿಗೆ ಜೈಲು ಶಿಕ್ಷೆ ವಿಧಿಸುವ ಮತ್ತು ₹50,000ದಿಂದ ₹5ಲಕ್ಷದಷ್ಟು ದಂಡ ವಿಧಿಸಲು ಅನುವುಮಾಡಿಕೊಡುವ ಮಸೂದೆಗಳು ಮುಂಗಾರು ಅಧಿವೇಶನದಲ್ಲಿ ಮಂಡನೆಯಾಗಲಿರುವ ಪ್ರಮುಖ ಮಸೂದೆಗಳಾಗಿವೆ.
ಕೃಷಿಕರು ತಮ್ಮ ಉತ್ಪನ್ನಗಳನ್ನು ಎಪಿಎಂಸಿಯ ಹೊರಗೆ ಯಾರಿಗೆ ಬೇಕಾದರೂ ಮಾರಾಟ ಮಾಡಲು ಅನುಮತಿ ನೀಡುವ ಸುಗ್ರೀವಾಜ್ಞೆ ಹಾಗೂ ಕೃಷಿ ವ್ಯಾಪಾರ ಸಂಸ್ಥೆಗಳ ಜತೆಗೆ ಕೃಷಿಗೆ ಸಂಬಂಧಿಸಿದ ಒಪ್ಪಂದ ಮಾಡಿಕೊಳ್ಳಲು ರೈತರಿಗೆ ಅನುವುಮಾಡಿಕೊಡುವ ಸುಗ್ರೀವಾಜ್ಞೆಗಳ ಬಗ್ಗೆ ಅಧಿವೇಶನದಲ್ಲಿ ಸರ್ಕಾರ ಹಾಗೂ ವಿರೋಧ ಪಕ್ಷಗಳ ನಡುವೆ ಬಿರುಸಿನ ಚರ್ಚೆ ನಡೆಯುವ ನಿರೀಕ್ಷೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.