ನವದೆಹಲಿ:ದೆಹಲಿ ಹಿಂಸಾಚಾರ ಬಗ್ಗೆ ಸಂಸತ್ನಲ್ಲಿ ಚರ್ಚೆ ಮಾಡಲು ಸಿದ್ಧ, ಆದರೆ ಹೋಳಿ ಹಬ್ಬ ಮುಗಿದ ಮೇಲೆ ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.
ಲೋಕಸಭೆಯಲ್ಲಿಮಂಗಳವಾರವೂ ದೆಹಲಿ ಹಿಂಸಾಚಾರದ ವಿಷಯದ ಬಗ್ಗೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ವಾಗ್ವಾದ ನಡೆದಿದೆ. ದೆಹಲಿ ಗಲಭೆಯಲ್ಲಿ 46 ಮಂದಿ ಸಾವಿಗೀಡಾಗಿದ್ದಾರೆ, 200ಕ್ಕಿಂತಲೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಬಗ್ಗೆ ಲೋಕಸಭೆಯಲ್ಲಿ ಚರ್ಚೆಯಾಗಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದಿದ್ದು, ಸ್ಪೀಕರ್ಓಂ ಬಿರ್ಲಾ ಕಲಾಪ ಮುಂದೂಡಿದ್ದಾರೆ.
ಕಲಾಪ ನಡೆಯುತ್ತಿರುವಾಗ ವಿಪಕ್ಷದ ಯಾವೊಬ್ಬ ಸದಸ್ಯರು ಕೂಡಾ ಅತ್ತಿಂದಿತ್ತ ಹೋಗುವಂತಿಲ್ಲ. ಹಾಗೆ ಹೋದರೆ ಆ ಸದಸ್ಯರನ್ನು ಕಲಾಪದಲ್ಲಿ ಭಾಗವಹಿಸದಂತೆ ಅಮಾನತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಅದೇ ವೇಳೆ ಸದನದೊಳಗೆ ಪ್ಲೆಕಾರ್ಡ್ ತರಬಾರದು ಎಂದು ಬಿರ್ಲಾ ಹೇಳಿದ್ದಾರೆ.
ದೆಹಲಿ ಹಿಂಸಾಚಾರ ಬಗ್ಗೆ ರಾಜ್ಯಸಭೆಯಲ್ಲಿಯೂ ಭಾರೀ ಗದ್ದಲವುಂಟಾಗಿದ್ದು ಕಲಾಪವನ್ನು ಸಂಜೆ ಮೂರು ಗಂಟೆವರೆಗೆ ಮುಂದೂಡಲಾಗಿತ್ತು. ದೆಹಲಿ ದಳ್ಳುರಿ ಬಗ್ಗೆ ತಕ್ಷಣವೇ ಚರ್ಚೆಯಾಗಬೇಕು ಎಂದು ವಿಪಕ್ಷ ಪಟ್ಟು ಹಿಡಿದಿತ್ತು.
ದೆಹಲಿಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ನಾವು ಚರ್ಚೆಗೆ ಸಿದ್ದರಾಗಿದ್ದೇವೆ ಎಂದು ಕೇಂದ್ರ ಸಚಿವ ಥವಾರ್ ಚಾಂದ್ ಗೆಹ್ಲೋಟ್ ಹೇಳಿದ್ದಾರೆ. ಆದಾಗ್ಯೂ ಸರ್ಕಾರ ವಿಷಯಾಂತರ ಮಾಡುತ್ತಿದೆ ಎಂದು ವಿಪಕ್ಷಗಳು ಆರೋಪಿಸಿವೆ.
ಇದನ್ನೂ ಓದಿ:ಸಂಸತ್ ಕಲಾಪ ನುಂಗಿದ ಹಿಂಸಾಚಾರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.