ADVERTISEMENT

ಕಾಶ್ಮೀರದಲ್ಲಿ ಹೆಚ್ಚುವರಿ ಸೇನಾ ಸಿಬ್ಬಂದಿ: ಆತಂಕ ಬೇಡ ಎಂದ ರಾಜ್ಯಪಾಲ ಮಲಿಕ್

ವಿಮಾನ ಟಿಕೆಟ್ ರದ್ದತಿ ಶುಲ್ಕ ಮನ್ನಾ: ವಿಮಾನಯಾನ ಸಂಸ್ಥೆಗಳಿಂದ ಘೋಷಣೆ

ಏಜೆನ್ಸೀಸ್
Published 3 ಆಗಸ್ಟ್ 2019, 4:42 IST
Last Updated 3 ಆಗಸ್ಟ್ 2019, 4:42 IST
   

ಶ್ರೀನಗರ:ಜಮ್ಮು ಮತ್ತು ಕಾಶ್ಮೀರದಲ್ಲಿಹೆಚ್ಚುವರಿ ಸೇನಾ ಸಿಬ್ಬಂದಿ ನಿಯೋಜಿಸಿರುವುದಕ್ಕೆ ಆತಂಕ ಬೇಡ ಎಂದು ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ.

ಅಮರನಾಥ ಯಾತ್ರಿಕರ ಮೇಲೆ ಭಯೋತ್ಪಾದಕರ ದಾಳಿ ನಡೆಯುವ ಭೀತಿ ಹಿನ್ನೆಲೆಯಲ್ಲಿ ಸೇನಾ ನಿಯೋಜನೆ ಮಾಡಲಾಗಿದೆ. ಅಮರನಾಥ ಯಾತ್ರೆ ರದ್ದುಗೊಳಿಸಿರುವುದನ್ನು ಇತರ ವಿಷಯಗಳ ಜತೆ ಹೋಲಿಸಿಕೊಂಡು ‘ಅನಗತ್ಯ ಭೀತಿ’ ಸೃಷ್ಟಿಸಬಾರದು ಎಂದು ಅವರು ಮನವಿ ಮಾಡಿದ್ದಾರೆ. ಅಲ್ಲದೆ, ಜಮ್ಮು ಮತ್ತು ಕಾಶ್ಮೀರದ ನಾಗರಿಕರಿಗೆ ವಿಶೇಷ ಅಧಿಕಾರ ನೀಡಿರುವ ಸಂವಿಧಾನದ 35 ಎ ಕಲಂ ಅನ್ನು ರದ್ದುಗೊಳಿಸುವ ಯಾವುದೇ ಯೋಜನೆಯಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ವಿಮಾನ ಟಿಕೆಟ್ ರದ್ದತಿ ಶುಲ್ಕ ಮನ್ನಾ:ಅಮರನಾಥ ಯಾತ್ರಿಕರು ಮತ್ತು ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರದಿಂದ ಆದಷ್ಟು ಬೇಗನೆ ಹೊರ ಹೋಗಬೇಕು ಎಂದು ಅಲ್ಲಿನ ಸರ್ಕಾರ ಸೂಚನೆ ನೀಡಿದೆ. ಹೀಗಾಗಿ ಯಾತ್ರೆಗೆ ತೆರಳಲು ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ ಟಿಕೆಟ್‌ ರದ್ದತಿ ಮತ್ತು ಪ್ರಯಾಣದ ದಿನಾಂಕ ಬದಲಾವಣೆ ಮಾಡುವುದಕ್ಕೆ ಸಂಬಂಧಿಸಿದ ಶುಲ್ಕವನ್ನು ಪೂರ್ಣ ಮನ್ನಾ ಮಾಡಲು ವಿಮಾನಯಾನ ಸಂಸ್ಥೆಗಳು ನಿರ್ಧರಿಸಿವೆ. ಏರ್ ಇಂಡಿಯಾ, ಗೋ ಏರ್, ಇಂಡಿಗೊ, ವಿಸ್ತಾರ ವಿಮಾನಯಾನ ಸಂಸ್ಥೆಗಳುಶುಲ್ಕ ಮನ್ನಾ ಘೋಷಿಸಿವೆ. ಏರ್ ಇಂಡಿಯಾದ ಶುಲ್ಕ ರದ್ದತಿ ಆಗಸ್ಟ್ 15ರವರೆಗೆ ಇರಲಿದ್ದು, ವಿಸ್ತಾರ ಮತ್ತು ಇಂಡಿಗೊದ ಶುಲ್ಕ ರದ್ದತಿ ಅವಧಿ ಆಗಸ್ಟ್ 9ಕ್ಕೆ ಕೊನೆಗೊಳ್ಳಲಿದೆ.

ಅಮರನಾಥ ಯಾತ್ರಿಕರ ಮೇಲೆ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಮಾಹಿತಿ ಬಂದಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ವಾಪಸ್ ತೆರಳುವಂತೆ ಯಾತ್ರಿಕರಿಗೆ ಶುಕ್ರವಾರ ತಿಳಿಸಲಾಗಿತ್ತು. ಜತೆಗೆ,ಜಮ್ಮು ಮತ್ತು ಕಾಶ್ಮೀರಕ್ಕೆ ಹೆಚ್ಚುವರಿಯಾಗಿ 28 ಸಾವಿರ ಯೋಧರನ್ನು ಕಳುಹಿಸಲು ನಿರ್ಧರಿಸಲಾಗಿದೆ ಎಂಬ ಸುದ್ದಿ ಜನರ ಕಳವಳವನ್ನು ಹೆಚ್ಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.