ADVERTISEMENT

ದೇಶದ್ರೋಹ ಕಾನೂನಿನ ಸಿಂಧುತ್ವ ಮರುಪರಿಶೀಲನೆ ಪ್ರಗತಿಯಲ್ಲಿದೆ: ಕೇಂದ್ರ ಸರ್ಕಾರ

ಪಿಟಿಐ
Published 1 ಮೇ 2023, 18:05 IST
Last Updated 1 ಮೇ 2023, 18:05 IST
ಸಂಸತ್‌
ಸಂಸತ್‌   

ನವದೆಹಲಿ: ‘ಅತ್ಯಂತ ಹಳೆಯದಾದ ದೇಶದ್ರೋಹ ಕಾನೂನಿನ ಸಾಂವಿಧಾನಿಕ ಸಿಂಧುತ್ವಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ಮರುಪರಿಶೀಲನೆ ಪ್ರಗತಿಯಲ್ಲಿದೆ’ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸೋಮವಾರ ತಿಳಿಸಿತು.

ಈ ಕಾನೂನಿನ ಸಿಂಧುತ್ವ ಕುರಿತು ಸಲ್ಲಿಸಲಾದ ಹಲವು ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌, ನ್ಯಾಯಮೂರ್ತಿ ಜೆ.ವಿ. ಪಾರ್ದೀವಾಲ ಅವರಿದ್ದ ಪೀಠವು, ಮುಂದಿನ ವಿಚಾರಣೆಯನ್ನು ಆಗಸ್ಟ್‌ ಎರಡನೇ ವಾರಕ್ಕೆ ಮುಂದೂಡಿತು.

‘ಮರು‍ಪರಿಶೀಲನೆಯ ಕೆಲಸ ಪ್ರಗತಿಯಲ್ಲಿದೆ. ಆದ್ದರಿಂದ, ಮುಂದಿನ ವಿಚಾರಣೆಯನ್ನು ಸಂಸತ್ತಿನ ಮುಂಗಾರ ಅಧಿವೇಶನದ ಬಳಿಕ ನಡೆಸಿ’ ಎಂದು ಅಟಾರ್ನಿ ಜನರಲ್‌ ಆರ್‌. ವೆಂಕಟರಮಣಿ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದರು.

ADVERTISEMENT

‘ಅರ್ಜಿಗಳ ವಿಚಾರಣೆಯನ್ನು ಏಳು ನ್ಯಾಯಾಮೂರ್ತಿಗಳ ಪೀಠಕ್ಕೆ ವರ್ಗಾಯಿಸಿ’ ಎಂದು ಅರ್ಜಿದಾರರ ಪರ ಇದ್ದ ವಕೀಲ ಗೋಪಾಲ್‌ ಶಂಕರನಾರಾಯಣ ನ್ಯಾಯಾಲಯವನ್ನು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, ‘ಮೊದಲು ಮರು ಪರಿಶೀಲನೆ ನಡೆಯಲಿ. ನಂತರ ಏಳು ನ್ಯಾಯಾಮೂರ್ತಿಗಳ ಪೀಠಕ್ಕೆ ವಿಚಾರಣೆಯನ್ನು ವರ್ಗಾಯಿಸುವ ಕುರಿತು ವಿಚಾರ ಮಾಡೋಣ’ ಎಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.