ನವದೆಹಲಿ: ಕೇಂದ್ರ ಸರ್ಕಾರವು ಅಪರಾಧಗಳನ್ನು ಜಾತಿ, ಮತ ಅಥವಾ ಧರ್ಮದ ಕನ್ನಡಿಯೊಳಗಿನಿಂದ ನೋಡುವುದಿಲ್ಲ. ಯಾವುದೇ ಅಪರಾಧ ಶಾಂತಿ ಹಾಗೂ ಮಾನವೀಯತೆಯ ವಿರುದ್ಧವಾಗಿರುತ್ತದೆ ಎಂದು ಕೇಂದ್ರ ಗೃಹ ರಾಜ್ಯ ಖಾತೆ ಸಚಿವ ಜಿ.ಕಿಶನ್ ರೆಡ್ಡಿ ಮಂಗಳವಾರ ತಿಳಿಸಿದರು.
ಬೆರಳಚ್ಚು ಸಂಸ್ಥೆಯ ನಿರ್ದೇಶಕರ ರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ದುರ್ಬಲರು ಹಾಗೂ ಮಹಿಳೆಯರ ಮೇಲಿನ ಅಪರಾಧ ಕೃತ್ಯಗಳನ್ನು ಸರ್ಕಾರ ಸಹಿಸುವುದಿಲ್ಲ. ಸಂತ್ರಸ್ತರಿಗೆ ಶೀಘ್ರದಲ್ಲೇ ನ್ಯಾಯ ಒದಗಿಸುವುದಕ್ಕೆ ಬೇಕಾದ ಎಲ್ಲ ಕ್ರಮಗಳನ್ನೂ ಕೇಂದ್ರ ಸರ್ಕಾರ ಕೈಗೊಳ್ಳಲಿದೆ’ ಎಂದರು.ಹಾಥರಸ್ನಲ್ಲಿ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಘಟನೆಯ ಕುರಿತು ಸಿಬಿಐ ತನಿಖೆ ಆರಂಭಿಸಿದ್ದು, ಇದರ ಬೆನ್ನಲ್ಲೇರೆಡ್ಡಿ ಅವರು ಈ ಹೇಳಿಕೆ ನೀಡಿದ್ದಾರೆ.
‘ಕಾನೂನು ಸುವ್ಯವಸ್ಥೆ ಆಯಾ ರಾಜ್ಯದ ವಿಷಯ. ಹೀಗಿದ್ದರೂ, ಅದರ ಮೇಲೆ ನಿಗಾ ಇರಿಸುವಲ್ಲಿ ಕೇಂದ್ರದ ಪಾತ್ರ ಮಹತ್ವದ್ದಾಗಿದೆ. ಅಪರಾಧ ಕೃತ್ಯಗಳ ತಡೆಗೆ ಕ್ರಮ, ಪೊಲೀಸ್ ಇಲಾಖೆಯ ಆಧುನೀಕರಣ, ಸಾಮರ್ಥ್ಯ ಹೆಚ್ಚಳಕ್ಕೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸಹಾಯ ಮಾಡುತ್ತಿದೆ. 2019–20ರಲ್ಲಿ ಪೊಲೀಸ್ ಇಲಾಖೆಯ ಆಧುನೀಕರಣಕ್ಕೆ ಕೇಂದ್ರ ಸರ್ಕಾರ ₹780 ಕೋಟಿ ಬಿಡುಗಡೆಗೊಳಿಸಿದೆ’ ಎಂದರು.
ಇದೇ ವೇಳೆ ಎನ್ಸಿಆರ್ಬಿ ನಿರ್ಮಾಣ ಮಾಡಿರುವಅತ್ಯಾಧುನಿಕ ಇ–ಸೈಬರ್ ಪ್ರಯೋಗಾಲಯಕ್ಕೂ ರೆಡ್ಡಿ ಅವರು ಚಾಲನೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.