ADVERTISEMENT

ಸರಕು–ಸೇವೆಗಳ ಬಳಕೆ ಹೆಚ್ಚಳ ಸರ್ಕಾರದ ಆದ್ಯತೆ: ಹಣಕಾಸು ಇಲಾಖೆ ಆರ್ಥಿಕ ಸಲಹೆಗಾರ

ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 20:15 IST
Last Updated 13 ಡಿಸೆಂಬರ್ 2019, 20:15 IST
ಕೆ. ಸುಬ್ರಮಣಿಯನ್‌
ಕೆ. ಸುಬ್ರಮಣಿಯನ್‌   

ನವದೆಹಲಿ (ಪಿಟಿಐ): ‘ಮಂದಗತಿಯಲ್ಲಿ ಸಾಗಿರುವ ಆರ್ಥಿಕತೆ ಪುಟಿದೇಳುವುದಕ್ಕೆ ಸರಕು ಮತ್ತು ಸೇವೆಗಳ ಬಳಕೆ ಪ್ರಮಾಣ ಹೆಚ್ಚಿಸುವುದು ಕೇಂದ್ರ ಸರ್ಕಾರದ ಆದ್ಯತೆಯಾಗಿದೆ’ ಎಂದು ಹಣಕಾಸು ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್‌ ಹೇಳಿದ್ದಾರೆ.

‘ಆರ್ಥಿಕ ವೃದ್ಧಿ ದರವನ್ನು 6 ವರ್ಷಗಳ ಹಿಂದಿನ ಕನಿಷ್ಠ ಮಟ್ಟದಿಂದ ಮೇಲೆತ್ತಲು ಸರ್ಕಾರವು ಇತ್ತೀಚಿನ ದಿನಗಳಲ್ಲಿ ಕಾರ್ಪೊರೇಟ್‌ ತೆರಿಗೆ ಕಡಿತವೂ ಸೇರಿದಂತೆ ಹಲವಾರು ನಿರ್ಧಾರಗಳನ್ನು ಜಾರಿಗೆ ತಂದಿದೆ.

‘ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಪುನರ್ಧನ ಒದಗಿಸಲಾಗಿದೆ. ವಸತಿ ನಿರ್ಮಾಣ ಯೋಜನೆಗಳಿಗೆ ಹಣಕಾಸು ನೆರವು ಕಲ್ಪಿಸಲಾಗಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ರಿಟೇಲ್‌ ಸಾಲಕ್ಕೆ ಬೆಂಬಲ ನೀಡಲು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಮತ್ತು ಗೃಹ ನಿರ್ಮಾಣ ಕಂಪನಿಗಳಿಗೆ ₹ 4.47 ಲಕ್ಷ ಕೋಟಿ ಮಂಜೂರು ಮಾಡಲಾಗಿದೆ. ಭಾಗಶಃ ಸಾಲ ಖಾತರಿ ಯೋಜನೆಯಡಿ ₹ 7,657 ಕೋಟಿಗಳ 17 ಪ್ರಸ್ತಾವಗಳಿಗೆ ಅನುಮೋದನೆ ನೀಡಲಾಗಿದೆ.

‘ಬಜೆಟ್‌ನಲ್ಲಿ ನಿಗದಿ ಮಾಡಿರುವ₹3.38 ಲಕ್ಷ ಕೋಟಿ ಮೊತ್ತದ ಬಂಡವಾಳ ವೆಚ್ಚದ ಶೇ 66ರಷ್ಟನ್ನು ಈಗಾಗಲೇ ಕಾರ್ಯಗತಗೊಳಿಸಲಾಗಿದೆ. ರೈಲ್ವೆ ಮತ್ತು ರಸ್ತೆ ಸಚಿವಾಲಯಗಳ ಹೂಡಿಕೆಯು ಈ ತಿಂಗಳಾಂತ್ಯಕ್ಕೆ ₹ 2.46 ಲಕ್ಷ ಕೋಟಿಗೆ ತಲುಪಲಿದೆ.

‘ನವೆಂಬರ್‌ 27ರವರೆಗೆ ₹ 70 ಸಾವಿರ ಕೋಟಿ ಮೊತ್ತದ ರೆಪೊ ದರ ಆಧಾರಿತ 8 ಲಕ್ಷದಷ್ಟು ಸಾಲಗಳಿಗೆ ಮಂಜೂರು ಮಾಡಲಾಗಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ₹ 60,314 ಕೋಟಿ ಮೊತ್ತದ ಪುನರ್ಧನ ಒದಗಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.