ಚಂದ್ರಬಾಬು ನಾಯ್ಡು
ಅಮರಾವತಿ: ಕೇಂದ್ರ ಸರ್ಕಾರ ಕೈಗೊಂಡಿರುವ ಜಿಎಸ್ಟಿ ಸುಧಾರಣೆಗಳ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಲು ಆಂಧ್ರ ಪ್ರದೇಶ ಸರ್ಕಾರ ಅಕ್ಟೋಬರ್ ತಿಂಗಳವರೆಗೂ ವಿವಿಧ ಕಾರ್ಯಕ್ರಮಗಳನ್ನು ವಿಶೇಷ ಅಭಿಯಾನ ರೂಪದಲ್ಲಿ ಹಮ್ಮಿಕೊಂಡಿದೆ.
ಜಿಎಸ್ಟಿ ಸುಧಾರಣೆಯ ಪ್ರಯೋಜನಗಳು ಜನಸಾಮಾನ್ಯರಿಗೆ ದೊರೆಯುವಂತೆ ಮಾಡಲು ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಸಮೂಹ ಮಾಧ್ಯಮಗಳ ಬಳಕೆ, ಮನೆ ಮನೆಗೆ ತೆರಳಿ ಅರಿವು ಸೇರಿದಂತೆ ಅಕ್ಟೋಬರ್ ಅಂತ್ಯದವರೆಗೆ 65 ಸಾವಿರ ಕಾರ್ಯಕ್ರಮಗಳನ್ನು ಇದಕ್ಕಾಗಿ ಸಂಘಟಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಜಿಎಸ್ಟಿ 2.0 ಸುಧಾರಣೆಗಳು ಅರ್ಥ ವ್ಯವಸ್ಥೆಗೆ ಪುಷ್ಠಿ ನೀಡಿದ್ದು ಮೇಕ್ ಇನ್ ಇಂಡಿಯಾಕ್ಕೆ ಬಲ ತುಂಬಲಿದೆ. ಇದರಿಂದ ಜನರಲ್ಲಿ ದುಡ್ಡು ಉಳಿದು ಬೇಡಿಕೆ ಸೃಷ್ಟಿಯಾಗುತ್ತದೆ ಎಂದು ಅವರು ಹೇಳಿದ್ದಾರೆ.
ಎಲ್ಲ ಕಂಪನಿಗಳು ತಪ್ಪದೇ ಜಿಎಸ್ಟಿ ಸುಧಾರಣೆಗಳನ್ನು ಜನಸಾಮಾನ್ಯರಿಗೆ ವರ್ಗಾಯಿಸಬೇಕು ಎಂದು ಅವರು ಹೇಳಿದ್ದಾರೆ.
ಜಿಎಸ್ಟಿ ಮಂಡಳಿಯು 350ಕ್ಕೂ ಹೆಚ್ಚು ಉತ್ಪನ್ನಗಳ ತೆರಿಗೆ ದರಗಳನ್ನು ಪರಿಷ್ಕರಣೆ ಮಾಡಿದೆ. ಪ್ರಸ್ತುತ ಶೇ 5, 12, 18 ಹಾಗೂ ಶೇ 28ರಂತೆ ತೆರಿಗೆ ಹಂತಗಳಿವೆ. ಇವುಗಳನ್ನು ಪರಿಷ್ಕರಿಸಿ, ಕೇವಲ ಶೇ 5 ಹಾಗೂ ಶೇ 18ರಂತೆ ಎರಡು ಹಂತಗಳ ಜಿಎಸ್ಟಿ ವ್ಯವಸ್ಥೆ ಜಾರಿಗೊಳಿಸಲಾಗಿದೆ.
ನಿತ್ಯ ಬಳಕೆಯ ಹತ್ತು ಹಲವು ಉತ್ಪನ್ನಗಳು, ಸೇವೆಗಳ ಮೇಲಿನ ತೆರಿಗೆ ಪ್ರಮಾಣವನ್ನು ಕಡಿಮೆ ಮಾಡುವ ತೀರ್ಮಾನವನ್ನು ಜಿಎಸ್ಟಿ ಮಂಡಳಿಯು ಇತ್ತೀಚೆಗೆ ತೆಗೆದುಕೊಂಡಿದೆ. ಈ ತೀರ್ಮಾನಗಳು ನವರಾತ್ರಿಯ ಮೊದಲ ದಿನವಾದ ಇದೇ 22ರಿಂದಲೇ ಜಾರಿಗೆ ಬಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.