ADVERTISEMENT

ಕೋವಿಡ್ ಪರಿಣಾಮ ಸರಳವಾಗಿ ಜರುಗಿದ ಪುರಿ ಜಗನ್ನಾಥ ರಥಯಾತ್ರೆ

ಪಿಟಿಐ
Published 12 ಜುಲೈ 2021, 11:09 IST
Last Updated 12 ಜುಲೈ 2021, 11:09 IST
ಭಕ್ತರ ಅನುಪಸ್ಥಿತಿಯಲ್ಲಿಯೇ ಸೋಮವಾರ ಪುರಿಯಲ್ಲಿ ಹೆಸರಾಂತ ಜಗನ್ನಾಥ ರಥಯಾತ್ರೆಯು ಸರಳವಾಗಿ ಜರುಗಿತು
ಭಕ್ತರ ಅನುಪಸ್ಥಿತಿಯಲ್ಲಿಯೇ ಸೋಮವಾರ ಪುರಿಯಲ್ಲಿ ಹೆಸರಾಂತ ಜಗನ್ನಾಥ ರಥಯಾತ್ರೆಯು ಸರಳವಾಗಿ ಜರುಗಿತು   

ಅಹಮದಾಬಾದ್‌: ಕೋವಿಡ್‌ ನಿರ್ಬಂಧದ ಕಾರಣ ಭಕ್ತ ಸಮುದಾಯದ ವಿರಳ ಉಪಸ್ಥಿತಿಯಲ್ಲಿ ಪುರಿಯ ಹೆಸರಾಂತ ಜಗನ್ನಾಥ ರಥಯಾತ್ರೆ ಸೋಮವಾರ ಧಾರ್ಮಿಕ ವಿಧಿಗಳ ಅನುಸಾರ ಸರಳವಾಗಿ ನಡೆಯಿತು.

144ನೇ ವಾರ್ಷಿಕ ರಥಯಾತ್ರೆಯಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಅವಕಾಶವಿರಲಿಲ್ಲ. ಪೊಲೀಸ್‌ರ ಹೆಚ್ಚುವರಿ ಭದ್ರತೆ ಇತ್ತು. ರಥಯಾತ್ರೆ ಸಾಗಿದ ಮಾರ್ಗದಲ್ಲಿ ಭಕ್ತರ ಗುಂಪುಗೂಡುವಿಕೆ ತಪ್ಪಿಸಲು ಕರ್ಫ್ಯೂ ವಿಧಿಸಲಾಗಿತ್ತು.

ಜಗನ್ನಾಥ ಸ್ವಾಮಿ, ತಮ್ಮ ಬಾಲಭದ್ರ, ತಂಗಿ ಸುಭದ್ರಾ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ರಥಗಳ ಯಾತ್ರೆ ನಡೆಸಲಾಗುತ್ತದೆ. 400 ವರ್ಷಗಳ ಇತಿಹಾಸವಿರುವ ಜಗನ್ನಾಥ ದೇವಸ್ಥಾನದ ಆವರಣದಿಂದ ರಥಯಾತ್ರೆ ಆರಂಭವಾಯಿತು. ಬೆಳಿಗ್ಗೆ 7 ಗಂಟೆಗೆ ಆರಂಭವಾಗಿ, ಮತ್ತೆ 11 ಗಂಟೆಗೆ ರಥಗಳು ಸ್ವಸ್ಥಾನಕ್ಕೆ ಮರಳಿದವು ಎಂದು ಅಧಿಕಾರಿಗಳು ತಿಳಿಸಿದರು.

ADVERTISEMENT

ರಥಗಳು ದೇಗುಲಕ್ಕೆ ಮರಳಿದ ಬಳಿಕ ಗೃಹ ಸಚಿವ ಅಮಿತ್ ಶಾ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಮಂಗಳಾರತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದಕ್ಕೂ ಮುನ್ನ ರಥಗಳನ್ನು ಸ್ವಚ್ಛಗೊಳಿಸುವ ‘ಪಹಿಂದ್ ವಿಧಿ‘ ನೆರವೇರಿಸಿದ ಮುಖ್ಯಮಂತ್ರಿ ವಿಜಯ್‌ ರೂಪಾಣಿ, ಉಪ ಮುಖ್ಯಮಂತ್ರಿ ನಿತಿನ್‌ ಪಟೇಲ್‌ ರಥಯಾತ್ರೆಗೆ ಚಾಲನೆ ನೀಡಿದ್ದರು.

23 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಭದ್ರತೆಗೆ ನಿಯೋಜಿಸಲ್ಪಟ್ಟಿದ್ದ ಪೊಲೀಸರು, ಭದ್ರತಾ ಸಿಬ್ಬಂದಿಯ ಕಟ್ಟೆಚ್ಚರದ ನಡುವೆಯೇ ರಥಯಾತ್ರೆಯು ಜರುಗಿತು. ಸಾಮಾನ್ಯ ಆಚರಣೆಯ ವೇಳೆಗೆ ಈ ರಥಯಾತ್ರೆಯು ಸುಮಾರು 12 ಗಂಟೆಗಳ ಅವಧಿಯಲ್ಲಿ 19 ಕಿ.ಮೀ ಅಂತರವನ್ನು ಕ್ರಮಿಸಿ ದೇವಸ್ಥಾನಕ್ಕೆ ಮರಳುತ್ತಿತ್ತು.

ಈ ಬಾರಿ ಕೋವಿಡ್‌ ಮಾರ್ಗಸೂಚಿಗಳ ಪಾಲನೆಗೆ ಒತ್ತು ನೀಡಿದ್ದು, ಭಕ್ತರು ಸೇರುವುದನ್ನು ತಪ್ಪಿಸಲು ರಥಯಾತ್ರೆಯ ನೇರ ಪ್ರಸಾರದ ವ್ಯವಸ್ಥೆ ಇತ್ತು. ಭಕ್ತರು ಇದನ್ನು ಟೆಲಿವಿಷನ್‌ನಲ್ಲಿ ವೀಕ್ಷಿಸಿ ಕಣ್ತುಂಬಿಕೊಂಡರು.

ಕೋವಿಡ್‌ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕಳೆದ ವರ್ಷ ಎಂದಿನಂತೆ ರಥಯಾತ್ರೆ ನಡೆಸಲು ಅನುಮತಿಯನ್ನು ಗುಜರಾತ್ ಹೈಕೋರ್ಟ್‌ ನಿರಾಕರಿಸಿತ್ತು. ಆ ಬಳಿಕ ಸಾಂಕೇತಿಕವಾಗಿ ರಥಯಾತ್ರೆಯನ್ನು ಆಚರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.