ಅಹಮದಾಬಾದ್ (ಪಿಟಿಐ): ದಲಿತ ಯುವಕನೊಬ್ಬ ಹುರಿ ಮೀಸೆ ಬಿಟ್ಟುಕೊಂಡು, ಚಡ್ಡಿ ಧರಿಸಿ ಗ್ರಾಮದಲ್ಲಿ ಓಡಾಡಿದ್ದಕ್ಕೆ ಇಲ್ಲಿನ ಕವಿತಾ ಗ್ರಾಮದಲ್ಲಿ ದಲಿತರು ಮತ್ತು ರಜಪೂತ ಸಮುದಾಯದವರ ನಡುವೆ ಘರ್ಷಣೆ ನಡೆದಿದೆ.
ರಮಣ್ ಭಾಯ್ ಮಾಕ್ವಾನ ಎಂಬುವವರು ತನ್ನ ಸೋದರಳಿಯ ವಿಜಯ್ ಜುಲೈ 31ರಂದು ರಾತ್ರಿ ಗ್ರಾಮದ ಅಂಗಡಿಗೆ ಹೋಗಿದ್ದ. ಆಗ ರಜಪೂತ್ ಸಮುದಾಯದ ಏಳು ಮಂದಿ, ವಿಜಯ್ ಮೀಸೆ ಬಿಟ್ಟುಕೊಂಡು ಚಡ್ಡಿ ಧರಿಸಿರುವುದಕ್ಕೆ ಆಕ್ಷೇಪಿಸಿ, ಜಾತಿ ನಿಂದನೆ ಮಾಡಿದ್ದರು. ಅಲ್ಲದೆ ಆತನ ಮೇಲೆ ಹಲ್ಲೆ ಕೂಡ ನಡೆಸಿದ್ದರು ಎಂದು ಆರೋಪಿಸಿದ್ದಾರೆ.
ಕೊಲೆ ಯತ್ನ ಆರೋಪ ಮತ್ತು ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಗಂಭೀರ್ ಸಿನ್ನಾ ರಾಥೋಡ್ ಸೇರಿದಂತೆ ರಜಪೂತ್ ಸಮುದಾಯದ ಕೆಲವು ಮಂದಿ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜುಲೈ 29ರಂದು ಗ್ರಾಮದ ಪ್ರಾಥಮಿಕ ಶಾಲೆ ಬಳಿ ದಲಿತ ಮತ್ತು ರಜಪೂತ ಯುವಕರ ನಡುವೆ ವಾಗ್ವಾದ ನಡೆದಿತ್ತು. ಅದೇ ದ್ವೇಷಕ್ಕೆ ವಿಜಯ್ ಹಾಗೂ ಇತರರು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ರಾಥೋಡ್ ಕೂಡ ಪ್ರಕರಣ ದಾಖಲಿಸಿದ್ದಾರೆ.
ಎರಡೂ ಸಮುದಾಯದವರು ಪರಸ್ಪರ ವಿರುದ್ಧ ನೀಡಿರುವ ದೂರುಗಳನ್ನು ಬಾವ್ಲಾ ಠಾಣೆ ಪೊಲೀಸರು ದಾಖಲಿಸಿಕೊಂಡಿದ್ದಾರೆ. ರಜಪೂತ್ ಸಮುದಾಯದ ಐದು ಮಂದಿ ಯುವಕರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಡಿಎಸ್ಪಿ ಪಿ.ಡಿ.ಮಾನ್ವರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.