ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ರಾಜ್ಕೋಟ್ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಇಂದ್ರನೀಲ ರಾಜಗುರು ಅವರು ಧಾರ್ಮಿಕ ಸ್ಥಳಗಳಾದ ಅಜ್ಮೀರ್ ಮತ್ತು ಸೋಮನಾಥದ ಕುರಿತು ಸಾರ್ವಜನಿಕ ಸಭೆಯೊಂದರಲ್ಲಿ ನೀಡಿದ್ದಾರೆ ಎನ್ನಲಾದ ಹೇಳಿಕೆಗೆ ವಿರೋಧ ವ್ಯಕ್ತವಾಗಿದೆ.
ಮುಸ್ಲಿಂ ಸಮುದಾಯದ ಜನರು ಹೆಚ್ಚಾಗಿ ಸೇರಿದ್ದ ಸಭೆ ಉದ್ದೇಶಿಸಿ ಶನಿವಾರ ಮಾತನಾಡಿದ ರಾಜಗುರು ಅವರು, ‘ಹರಹರ ಮಹಾದೇವ್’ ಎಂದು ಪಠಿಸುವಂತೆಹೇಳಿದರು. ಜನರು ಅದನ್ನು ಪಾಲಿಸಿದರು. ‘ನನ್ನ ಪ್ರಕಾರ, ಮಹಾದೇವ ಮತ್ತು ಅಲ್ಲಾಹು ಸಮಾನರು. ಅಜ್ಮೀರ್ನಲ್ಲಿ ಮಹಾದೇವ, ಸೋಮನಾಥದಲ್ಲಿ ಅಲ್ಲಾಹು ನೆಲೆಸಿದ್ದಾರೆ. ದೇವರು ದೊಡ್ಡವನು’ ಎಂದು ಹೇಳಿದರು.
‘ಸೋಮನಾಥಕ್ಕೆ ಹೋದಾಗ ಎಷ್ಟು ಸಂತಸವಾಗುತ್ತದೆಯೋ, ಅಜ್ಮೀರ್ಗೆ ಹೋದಾಗಲೂ ಅಷ್ಟೇ ಆಗುತ್ತದೆ. ನಮ್ಮಲ್ಲಿ ಸುಧಾರಣೆ ಆಗಬೇಕು ಎಂದು ಬಯಸುವವರು ಮೊದಲು ನಾವೆಲ್ಲರೂ ಮನುಷ್ಯರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಅವರು ಹೇಳಿದರು.
ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉದಯ್ ಕಂಗದ್ ಅವರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜಗುರು ಅವರ ಮಾತುಗಳು ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವಂತಿವೆ ಎಂದು ಆರೋಪಿಸಿದ್ದಾರೆ. ತಮ್ಮ ಭಾಷಣದ ವಿಡಿಯೊ ಸಾಮಾಜಿಕಜಾಲತಾಣಗಳಲ್ಲಿ ಹರಿದಾಡಿದ ಬಗ್ಗೆ ಪ್ರತಿಕ್ರಿಯಿಸಿರುವ ರಾಜಗುರು, ‘ನಾನು ಅಲ್ಲಾಹು ಅಕ್ಬರ್ ಎಂದಷ್ಟೇ ಹೇಳಿಲ್ಲ. 5 ಸಾವಿರ ಮುಸ್ಲಿಮರು ಹರಹರ ಮಹಾದೇವ್ ಎಂದು ಪಠಿಸಿದ್ದಾರೆ. ಅದನ್ನೂ ಕೇಳಿಸಿಕೊಳ್ಳಿ’ ಎಂದು ತಿರುಗೇಟು ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.