ಗಾಂಧಿನಗರ: ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಏಕೆ ಜಾರಿ ಮಾಡಬೇಕು ಮತ್ತು ರಾಜ್ಯಕ್ಕೆ ಯುಸಿಸಿ ಅಗತ್ಯ ಇದೆಯೇ ಎನ್ನುವುದನ್ನು ಪರಾಮರ್ಶಿಸಲು ಗುಜರಾತ್ ಸರ್ಕಾರವು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ರಂಜನಾ ದೇಸಾಯಿ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ಮಂಗಳವಾರ ರಚಿಸಿದೆ.
ಐವರು ಸದಸ್ಯರ ಸಮಿತಿ ಇದಾಗಿದ್ದು, 45 ದಿನಗಳಲ್ಲಿ ತನ್ನ ವರದಿಯನ್ನು ನೀಡಲಿದೆ. ಈ ಬಗ್ಗೆ ಮುಖ್ಯಮಂತ್ರಿ ಭುಪೆಂದರ್ ಪಟೇಲ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ‘ಈ ಸಮಿತಿಯು ಯುಸಿಸಿ ಕುರಿತು ಕರಡು ಮಸೂದೆಯೊಂದನ್ನೂ ರೂಪಿಸಲಿದೆ. ಮೊದಲಿಗೆ ಸಮಿತಿಯು ವರದಿಯನ್ನು ನೀಡಲಿದೆ. ವರದಿ ಬಂದ ಬಳಿಕ ಯುಸಿಸಿ ಜಾರಿಯ ಬಗ್ಗೆ ನಿರ್ಧರಿಸಲಾಗುವುದು’ ಎಂದು ಪಟೇಲ್ ಹೇಳಿದರು.
‘ಮುಸ್ಲಿಂ ಧಾರ್ಮಿಕ ನಾಯಕರನ್ನೂ ಒಳಗೊಂಡು, ಈ ಸಮಿತಿಯು ಎಲ್ಲ ಧಾರ್ಮಿಕ ನಾಯಕರನ್ನು ಭೇಟಿ ಮಾಡಲಿದೆ. ದೇಶದಾದ್ಯಂತ ಯುಸಿಸಿ ಜಾರಿಯಾಗಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಆಶಯವನ್ನು ಪೂರೈಸಲು ಸರ್ಕಾರ ಬದ್ಧವಾಗಿದೆ’ ಎಂದರು. ಇತ್ತೀಚೆಗೆ ಬಿಜೆಪಿ ಆಡಳಿತವಿರುವ ಉತ್ತರಾಖಂಡದಲ್ಲಿ ಯುಸಿಸಿ ಜಾರಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.