ADVERTISEMENT

ರೋಗಿಯನ್ನು ಬೇರೆ ಆಸ್ಪತ್ರೆಗೆ ಸಾಗಿಸಲಾಗಿದೆ; ರೋಗಿ ಸತ್ತು ವಾರದ ನಂತರ ಬಂತು ಸಂದೇಶ

ಏಜೆನ್ಸೀಸ್
Published 2 ಜೂನ್ 2020, 3:13 IST
Last Updated 2 ಜೂನ್ 2020, 3:13 IST
ಸಾಗರ್ ಶಾ
ಸಾಗರ್ ಶಾ   

ಅಹಮದಾಬಾದ್:ಗುಜರಾತಿನ ಸಾಗರ್ ಶಾ ಎಂಬವರಿಗೆ ಆಸ್ಪತೆಯಿಂದ ಮೊಬೈಲ್ ಸಂದೇಶವೊಂದು ಬಂದಿತ್ತು. ಕಿಶೋರ್‌ಭಾಯ್ ಹೀರಾಲಾಲ್ ಶಾ ಅವರನ್ನು ಮೇ.30ರಂದು 6.38ಕ್ಕೆ ಅಹಮದಾಬಾದ್‌ನ ಅಸರ್ವಾದಲ್ಲಿರುವ ಕೋವಿಡ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂಬುದು ಮೊದಲ ಸಂದೇಶ. ಇದರ ಬೆನ್ನಲ್ಲೇ 'ಕಿಶೋರ್‌ಭಾಯ್ ಹೀರಾಲಾಲ್ಶಾ ಅವರನ್ನು ಮೇ.30, 6.38ಕ್ಕೆ ಅಸರ್ವಾದಲ್ಲಿರುವ ಜಿಸಿಆರ್‌ಐ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ' ಎಂಬ ಸಂದೇಶವೂ ಬಂತು. ಆದರೆ ಸಾಗರ್ ಶಾ ಅವರ ಅಪ್ಪ ಕಿಶೋರ್‌ಭಾಯ್ ಹೀರಾಲಾಲ್ ಮೇ.16ರಂದು ಮೃತಪಟ್ಟಿದ್ದರು.

ಆಸ್ಪತ್ರೆಯವರ ಸಂದೇಶ ನೋಡಿ ದಿಗಿಲುಗೊಂಡೆ, ದುಃಖವೂ ಆಯಿತು. ಆಸ್ಪತ್ರೆಯವರ ಬೇಜವಾಬ್ದಾರಿಯನ್ನುಇದು ತೋರಿಸುತ್ತದೆ. ಮೇ.16ರಂದು ನಾನೇ ನನ್ನ ಅಪ್ಪನ ಅಂತ್ಯ ಸಂಸ್ಕಾರ ಮಾಡಿದ್ದೆ. ಅದರ ಫೋಟೊ ಕೂಡಾ ಇದೆ ಎಂದು ಸಾಗರ್ ಹೇಳಿದ್ದಾರೆ.
ಆಸ್ಪತ್ರೆಯಿಂದ ನನ್ನ ಅಪ್ಪನ ಮೃತದೇಹವನ್ನು ಪಡೆಯಲು ನಾನು ಕಷ್ಟಪಟ್ಟಿದ್ದೆ. ಅವರ ದೇಹದಲ್ಲಿದ್ದ ಚಿನ್ನಾಭರಣ ಜೇಬಲ್ಲಿದ್ದ ₹10,000 ಕಳವು ಆಗಿದೆ ಎಂದ ಪೊಲೀಸ್ ಠಾಣೆಗೆ ಹೋಗಿ ಎಫ್ಐಆರ್ ದಾಖಲಿಸಲು ಹರಸಾಹಸ ಪಡಬೇಕಾಯಿತು.

ಕಾಂಗ್ರೆಸ್ ಶಾಸಕ ಇಮ್ರಾನ್ ಖೇಡೇವಾಲಾ ಅವರ ನೆರವಿನಿಂದ ನನ್ನ ಅಪ್ಪ ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿತು. ಸುಮಾರು ಗಂಟೆಗಳ ಕಾಲ ಕಾದ ನಂತರ ಮೃತದೇಹವನ್ನು ಆಸ್ಪತ್ರೆಯವರು ಬಿಟ್ಟುಕೊಟ್ಟಿದ್ದರು.

ADVERTISEMENT

ದರೀಯಾಪುರ್‌ನಲ್ಲಿ ಟ್ಯೂಷನ್ ಟೀಚರ್ ಆಗಿರುವ ಸಾಗರ್, ತಮ್ಮ ಪರಿಸ್ಥಿತಿಯನ್ನು ವಿವರಿಸಿ ಒಂದು ವಿಡಿಯೊವನ್ನು ಅಪ್‍ಲೋಡ್ಮಾಡಿದ್ದು, ಆ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಗುಜರಾತಿನ ಸಿಜಿಆರ್‌ಐ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳ ಸಂಬಂಧಿಗಳನ್ನು ಯಾವ ರೀತಿ ಸತಾಯಿಸುತ್ತಿದ್ದಾರೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ ಎಂದು ಸಾಗರ್ ಹೇಳಿದ್ದಾರೆ. ಇದೇ ಆಸ್ಪತ್ರೆಯನ್ನು ಗುಜರಾತ್ ಹೈಕೋರ್ಟ್ 'ಕತ್ತಲ ಕೋಣೆ' ಎಂದು ಹೇಳಿತ್ತು.

ಆಸ್ಪತ್ರೆಯಲ್ಲಿ ಒಂದೇ ಹೆಸರಿನ ಇಬ್ಬರು ರೋಗಿಗಳಿದ್ದರು. ಹಾಗಾಗಿ ಗೊಂದಲವುಂಟಾಗಿದೆ ಎಂದು ಆಸ್ಪತ್ರೆಯ ಆರ್‌ಎಂಒ ಡಾ.ಸಂಜಯ್ ಕಪಾಡಿಯಾ ಹೇಳಿದ್ದಾರೆ. ಸರ್ವರ್ ಸಮಸ್ಯೆ ಆದ ಕಾರಣ ಅಲ್ಲಿದ್ದ ಮಾಹಿತಿಯಲ್ಲಿ ತಪ್ಪು ಕಂಡು ಬಂದಿದೆ. ಅದನ್ನು ಈಗ ಸರಿಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.