ಅಹಮದಾಬಾದ್: ಗರ್ಬಾ ನೃತ್ಯ ಕಾರ್ಯಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಐವರು ಮುಸ್ಲಿಂ ಯುವಕರನ್ನು ಸಾರ್ವಜನಿಕರ ಎದುರಲ್ಲೇ ಪೊಲೀಸರು ವಿದ್ಯುತ್ ಕಂಬಕ್ಕೆ ಕಟ್ಟಿ, ಲಾಠಿಯಿಂದ ಥಳಿಸಿದ್ದಾರೆ. ಈ ದೃಶ್ಯಗಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೊಲೀಸರ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದೆ. ಇದರಿಂದ ಎಚ್ಚೆತ್ತ ಗುಜರಾತ್ ಪೊಲೀಸ್ ಇಲಾಖೆ, ಪ್ರಕರಣದ ತನಿಖೆಗೆ ಬುಧವಾರ ಆದೇಶಿಸಿದೆ.
‘ವಿಡಿಯೊವನ್ನು ಪರಿಗಣಿಸಿ ತನಿಖೆಗೆ ಆದೇಶ ನೀಡ ಲಾಗಿದೆ’ ಎಂದು ಡಿಜಿಪಿ ಆಶಿಶ್ ಭಾಟಿಯಾ ಹೇಳಿದ್ದಾರೆ. ಖೇಡ ಜಿಲ್ಲೆಯ ಉಂಧೆಲ ಗ್ರಾಮದಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಸೋಮವಾರ ರಾತ್ರಿ ಗ್ರಾಮದ ದೇವಾಲಯದಲ್ಲಿ ಗರ್ಬಾ ನೃತ್ಯ ಕಾರ್ಯಕ್ರಮ ಆಯೋಜಿಸ ಲಾಗಿತ್ತು. ದೇವಾಲಯದ ಗೋಡೆಗೆ ಹೊಂದಿಕೊಂಡಂತೆ ಮಸೀದಿ ಇದ್ದು, ಕೆಲವು ಮುಸ್ಲಿಂ ಯುವಕರು ಕಾರ್ಯ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಖೇಡಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.
ಆನಂತರ ಗಲಭೆ ನಡೆದಿತ್ತು. ಆ ರಾತ್ರಿಯೇ ಮುಸ್ಲಿಂ ಸಮುದಾಯದ 10 ಮಂದಿ ಯುವಕರನ್ನು ಪೊಲೀಸರು ಬಂಧಿಸಿದ್ದರು. ಮಂಗಳವಾರ ಬೆಳಿಗ್ಗೆ ಐವರು ಯುವಕರನ್ನು ಪೊಲೀಸರು ಗ್ರಾಮಕ್ಕೆ ಕರೆತಂದಿದ್ದರು. ಐವರನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಲಾಠಿಯಿಂದ ಥಳಿಸಿದ್ದರು. ಒಬ್ಬರಾದ ಮೇಲೆ ಮತ್ತೊಬ್ಬ ಯುವಕನನ್ನು ಪೊಲೀಸರು ಲಾಠಿಯಿಂದ ಥಳಿ ಸುವುದನ್ನು ಗ್ರಾಮಸ್ಥರು ಸಂಭ್ರಮಿಸಿದ್ದರು. ಗ್ರಾಮಸ್ಥರು ಚಪ್ಪಾಳೆ ತಟ್ಟಿ, ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗಿದ್ದರು. ಇವೆಲ್ಲವೂ ವಿಡಿಯೊದಲ್ಲಿ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.