ADVERTISEMENT

ಗುಜರಾತ್‌: ರಾಹುಲ್ ಗಾಂಧಿ ಪರ ಪ್ರತಿಭಟನೆ– ಕಾಂಗ್ರೆಸ್‌ನ 16 ಶಾಸಕರ ಅಮಾನತು

ರಾಹುಲ್ ಗಾಂಧಿ ಅನರ್ಹತೆ ಪ್ರಶ್ನಿಸಿ ಪ್ರತಿಭಟಿಸಿದ ಶಾಸಕರು

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2023, 13:01 IST
Last Updated 27 ಮಾರ್ಚ್ 2023, 13:01 IST
   

ಗಾಂಧಿನಗರ (ಪಿಟಿಐ): ರಾಹುಲ್‌ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದನ್ನು ವಿರೋಧಿಸಿ ಗುಜರಾತ್‌ ವಿಧಾನಸಭೆಯೊಳಗೆ ಪ್ರತಿಭಟನೆ ನಡೆಸಿದ 16 ಕಾಂಗ್ರೆಸ್‌ ಶಾಸಕರನ್ನು ವಿಧಾನಸಭೆಯಿಂದ ಸೋಮವಾರ ಅಮಾನತು ಮಾಡಲಾಯಿತು. ಮಾರ್ಚ್‌ 29ರವರೆಗೆ ಬಜೆಟ್‌ ಅಧಿವೇಶನ ನಡೆಯಲಿದ್ದು, ಅಲ್ಲಿಯವರೆಗೆ ಈ ಅಮಾನತು ಜಾರಿಯಲ್ಲಿ ಇರಲಿದೆ.

ಇಮ್ರಾನ್‌ ಖೇಡವಾಲ, ಗೆನಿಬೆನ್‌ ಠಾಕೋರ್‌ ಮತ್ತು ಅಮೃತ್‌ಜಿತ್‌ ಠಾಕೋರ್‌ ಸೇರಿ ಕೆಲವು ಕಾಂಗ್ರೆಸ್‌ ಶಾಸಕರು ಸ್ಪೀಕರ್‌ ಪೀಠದ ಎದುರು ಬಂದು ಕುಳಿತು ‘ಮೋದಿ–ಅದಾನಿ ಅಣ್ಣ ತಮ್ಮ’ ಎಂಬ ಘೋಷಣೆಗಳನ್ನು ಕೂಗುತ್ತಿದ್ದರು. ತಮ್ಮ ಸ್ಥಾನಗಳಿಗೆ ಮರಳುವಂತೆ ಸ್ಪೀಕರ್‌ ಶಂಕರ್‌ ಚೌಧರಿ ಹಲವು ಬಾರಿ ಮನವಿ ಮಾಡದರೂ ಅವರು ತಮ್ಮ ಸ್ಥಾನಗಳಿಗೆ ಹಿಂದಿರುಗಲಿಲ್ಲ. ಬಳಿಕ ಅವರನ್ನು ಮಾರ್ಷಲ್‌ಗಳ ಸಹಾಯದಿಂದ ವಿಧಾನಸಭೆಯಿಂದ ಹೊರಗೆ ಕಳುಹಿಸಲಾಯಿತು.

ಕಾಂಗ್ರೆಸ್‌ನ 17 ಶಾಸಕರ ಪೈಕಿ ಅನಂತ್‌ ಪಟೇಲ್‌ ಅವರು ಮಾತ್ರ ಸೋಮವಾರದ ಬಜೆಟ್‌ ಅಧಿವೇಶನದಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಕಾಂಗ್ರೆಸ್‌ ಶಾಸಕರು ಕಪ್ಪುಪಟ್ಟಿ ಕಟ್ಟಿಕೊಂಡು ವಿಧಾನಸಭೆಯನ್ನು ಪ್ರವೇಶಿಸಿದ್ದರು. ಅಧಿವೇಶನದ ಪ್ರಶ್ನೋತ್ತರ ಅವಧಿ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಅಮಿತ್‌ ಛಾವ್ಡಾ ಅವರು ರಾಹುಲ್‌ರನ್ನು ಅನರ್ಹಗೊಳಿಸಿದ್ದರ ಕುರಿತು ಚರ್ಚೆ ನಡೆಸುವಂತೆ ಆಗ್ರಹಿಸಿದರು. ಪ್ರಶ್ನೋತ್ತರ ಅವಧಿಯಲ್ಲಿ ಚರ್ಚೆಗೆ ಅವಕಾಶ ನೀಡಲಾಗುವುದಿಲ್ಲ ಎಂದು ಹೇಳಿದ ಸ್ಪೀಕರ್‌ ಅವರು, ಅಮಿತ್‌ ಅವರಿಗೆ ಕುಳಿತುಕೊಳ್ಳುವಂತೆ ಸೂಚಿಸಿದರು. ಇದೇ ವೇಳೆ ಸ್ಪೀಕರ್‌ ಪೀಠದ ಎದುರು ಬಂದ ಇತರ ಶಾಸಕರು ಘೋಷಣೆಗಳನ್ನು ಕೂಗಿದರು ಮತ್ತು ಫಲಕಗಳನ್ನು ಪ್ರದರ್ಶಿಸಿದರು. ಅವರಿಗೆ ಹೊರಹೋಗುವಂತೆ ಸೂಚಿಸಿದ ಸ್ಪೀಕರ್‌ ಅವರನ್ನು ದಿನದ ಮಟ್ಟಿಗೆ ಅಮಾನತು ಮಾಡಿದರು.

ಪ್ರಶ್ನೋತ್ತರ ಅವಧಿ ಮುಗಿದ ಬಳಿಕ ಕಾಂಗ್ರೆಸ್‌ ಶಾಸಕರ ವರ್ತನೆ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಸಂಸದೀಯ ವ್ಯಹಾರಗಳ ಸಚಿವ ಋಷಿಕೇಶ್‌ ಪಟೇಲ್‌ ಅವರು, ದುರ್ವರ್ತನೆ ತೋರಿದ ಎಲ್ಲರನ್ನೂ ಬಜೆಟ್‌ ಅಧಿವೇಶ ಮುಗಿಯುವವರೆಗೆ ಅಮಾನತುಗೊಳಿಸಬೇಕು ಎಂದು ಸ್ಪೀಕರ್‌ಗೆ ಮನವಿ ಮಾಡಿದರು. ಇದಕ್ಕೆ ಸಮ್ಮತಿಸಿದ ಸ್ಪೀಕರ್‌, 16 ಶಾಸಕರನ್ನು ಅಧಿವೇಶನ ಮುಗಿಯುವವರೆಗೆ ಅಮಾನತುಗೊಳಿಸಿ ಆದೇಶ ಹೊರಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.