ADVERTISEMENT

ಅನಾನುಭವಿ ಭಟ್ಟಂಗಿಗಳ ಗುಂಪು ಕಾಂಗ್ರೆಸ್‌ಅನ್ನು ಮುನ್ನಡೆಸುತ್ತಿದೆ: ಆಜಾದ್‌

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2023, 16:13 IST
Last Updated 5 ಏಪ್ರಿಲ್ 2023, 16:13 IST
ಗುಲಾಮ್‌ ನಬಿ ಆಜಾದ್‌
ಗುಲಾಮ್‌ ನಬಿ ಆಜಾದ್‌   

ನವದೆಹಲಿ: ‘ಕಾಂಗ್ರೆಸ್‌ ಈಗಲೂ ರಿಮೋಟ್‌ ನಿಯಂತ್ರಣದ ಮೂಲಕ ನಡೆಯುತ್ತಿದೆ. ಅನಾನುಭವಿ ಭಟ್ಟಂಗಿಗಳ ಹೊಸ ಗುಂಪು ಪಕ್ಷದ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದೆ’ ಎಂದು ಹಿರಿಯ ರಾಜಕಾರಣಿ, ಮಾಜಿ ಕೇಂದ್ರ ಸಚಿವ, ಡೆಮಾಕ್ರೆಟಿಕ್‌ ಪ್ರೊಗ್ರೆಸಿವ್‌ ಆಜಾದ್‌ ಪಕ್ಷದ ಸಂಸ್ಥಾಪಕ ಗುಲಾಮ್‌ ನಬಿ ಆಜಾದ್‌ ಅವರು ಆರೋಪ ಮಾಡಿದರು.

ತಮ್ಮ ಆತ್ಮಕಥನ ‘ಆಜಾದ್‌– ಆ್ಯನ್‌ ಆಟೊಬಯಾಗ್ರಫಿ’ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಅವರು ಹೀಗೆ ಹೇಳಿದರು. ಜವಾಹರಲಾಲ್‌ ನೆಹರೂ, ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ಸೋನಿಯಾ ಗಾಂಧಿ ಅವರ ಕುರಿತು ನನಗೆ ಬಹಳ ಗೌರವವಿದೆ. ಆದರೆ ರಾಹುಲ್‌ ಗಾಂಧಿ ಜೊತೆ ರಾಜಕೀಯ ಭಿನ್ನಾಭಿಪ್ರಾಯವಿರುವುದು ನಿಜ ಎಂದರು.

‘ರಾಹುಲ್‌ ಗಾಂಧಿ ಒಬ್ಬ ಕಟ್ಟ ವ್ಯಕ್ತಿ ಅಲ್ಲ. ವೈಯಕ್ತಿಯ ಮಟ್ಟದಲ್ಲಿ ಅವರು ಉತ್ತಮ ವ್ಯಕ್ತಿಯೇ. ಅವರ ಜೊತೆ ನನಗೆ ಮೊದಲಿನಿಂದಲೂ ರಾಜಕೀಯ ಭಿನ್ನಾಭಿಪ್ರಾಯಗಳಿವೆ. ಈಗ ನಾನು ಕಾಂಗ್ರೆಸ್‌ನಲ್ಲಿ ಇಲ್ಲದ ಕಾರಣ ಅವರ ಒಳಿತು, ಕೆಡುಕುಗಳ ಬಗ್ಗೆ ನನಗೆ ಹೇಳಲಾಗುವುದಿಲ್ಲ’ ಎಂದರು.

ADVERTISEMENT

ಪುಸ್ತಕದಲ್ಲೂ ಅವರು ರಾಹುಲ್‌ ಗಾಂಧಿ ಜೊತೆಗೆ ತಮಗಿದ್ದ ಭಿನ್ನಾಭಿಪ್ರಾಯದ ಕುರಿತು ಪ್ರಸ್ತಾಪಿಸಿದ್ದಾರೆ.

ಕಾಂಗ್ರೆಸ್‌ ದೇಶವಿರೋಧಿ: ಕಾಂಗ್ರೆಸ್‌ಗೆ ಸಿದ್ಧಾಂತವೆಂಬುದೇ ಇಲ್ಲ. ಅದು ದೇಶದ ವಿರುದ್ಧ ಕೆಲಸ ಮಾಡುತ್ತಿರುವ ವಿಶ್ವಾಸಘಾತಕ ಪಕ್ಷ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಕಾಂಗ್ರೆಸನ್ನು ಟೀಕಿಸಿದ್ದಾರೆ.

ಔದಾರ್ಯಕ್ಕೆ ಅರ್ಹರಲ್ಲ: ಕಾಂಗ್ರೆಸ್‌

ಮಾಜಿ ಕೇಂದ್ರ ಸಚಿವರಾದ ಗುಲಾಬ್‌ ನಬಿ ಆಜಾದ್‌ ಮತ್ತು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಅವರು ಕಾಂಗ್ರೆಸ್‌ ವಿರುದ್ಧ ನೀಡಿರುವ ಹೇಳಿಕೆಗಳನ್ನು ಪಕ್ಷವು ಬುಧವಾರ ಖಂಡಿಸಿದೆ.

ಅವರಿಬ್ಬರು ಕಾಂಗ್ರೆಸ್‌ ವ್ಯವಸ್ಥೆಯಿಂದ ಬಹುವಾಗಿ ಫಲಾನುಭವಿಗಳಾದವರು. ಆದರೆ ಪಕ್ಷವು ತೋರಿದ ಔದಾರ್ಯಕ್ಕೆ ತಾವು ಅರ್ಹರಲ್ಲ ಎಂಬುದನ್ನು ಅವರಿಬ್ಬರು ರುಜುವಾತು ಮಾಡುತ್ತಿದ್ದಾರೆ. ಅವರಿಬ್ಬರೂ ತಮ್ಮ ನೈಜ ವ್ಯಕ್ತಿತ್ವವನ್ನು ತೋರುತ್ತಿದ್ದಾರೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಅವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.