
ಗುರು ತೇಗ್ ಬಹದ್ದೂರ್ ಅವರ 350ನೇ ಹುತಾತ್ಮ ದಿನದ ಅಂಗವಾಗಿ ಹೊರತಂದಿರುವ ವಿಶೇಷ ನಾಣ್ಯ ಹಾಗೂ ಅಂಚೆಚೀಟಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಬಿಡುಗಡೆ ಮಾಡಿದರು
ಪಿಟಿಐ ಚಿತ್ರ
ಕುರುಕ್ಷೇತ್ರ: ‘ಸತ್ಯ, ನ್ಯಾಯ ಹಾಗೂ ನಂಬಿಕೆಯ ರಕ್ಷಣೆಯೇ ತನ್ನ ಧರ್ಮ ಎಂಬುದಾಗಿ ಗುರು ತೇಗ್ ಬಹದ್ದೂರ್ ಪರಿಗಣಿಸಿದ್ದರು. ಈ ಉದ್ದೇಶಕ್ಕಾಗಿಯೇ ಅವರು ತಮ್ಮ ಪ್ರಾಣತ್ಯಾಗ ಮಾಡಿದರು’ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದರು.
ಸಿಖ್ ಧರ್ಮದ 9ನೇ ಗುರು ಆಗಿರುವ ಗುರು ತೇಗ್ ಬಹದ್ದೂರ್ ಅವರ 350ನೇ ಹುತಾತ್ಮ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನನ್ನ ನೇತೃತ್ವದ ಸರ್ಕಾರ ಕೂಡ ಈ ಗುರು ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲಿದೆ’ ಎಂದರು.
ಇದೇ ವೇಳೆ ಅವರು, ಗುರು ತೇಗ್ ಬಹದ್ದೂರ್ ಅವರ 350ನೇ ಹುತಾತ್ಮ ದಿನದ ಅಂಗವಾಗಿ ಹೊರತಂದಿರುವ ವಿಶೇಷ ನಾಣ್ಯ ಹಾಗೂ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು.
‘ಇಂದು ಬೆಳಿಗ್ಗೆ ಶ್ರೀರಾಮ ಪ್ರಭುವಿನ ನಗರವಾದ ಅಯೋಧ್ಯೆಯಲ್ಲಿ ಇದ್ದೆ. ಈಗ, ಶ್ರೀಕೃಷ್ಣನ ಊರಿನಲ್ಲಿ ಇದ್ದೇನೆ’ ಎಂದೂ ಹೇಳಿದರು.
‘ರಾಮ ಮಂದಿರ ಕುರಿತ ಸುಪ್ರೀಂ ಕೋರ್ಟ್ ತೀರ್ಪು 2019ರ ನವೆಂಬರ್ 9ರಂದು ಪ್ರಕಟವಾಯಿತು. ಆ ದಿನ ನಾನು ಪಂಜಾಬ್ನಲ್ಲಿರುವ ದೇರಾ ಬಾಬಾ ನಾನಕ್ಗೆ ಹೋಗಿದ್ದೆ. ಕರ್ತಾರಪುರ ಕಾರಿಡಾರ್ ಉದ್ಘಾಟನೆ ನೆರವೇರಿಸಿದ್ದೆ’ ಎಂದು ಸ್ಮರಿಸಿದರು.
‘ರಾಮ ಮಂದಿರ ನಿರ್ಮಾಣಕ್ಕೆ ದಾರಿ ತೋರುವಂತೆ ಹಾಗೂ ಲಕ್ಷಾಂತರ ಜನ ರಾಮನ ಭಕ್ತರ ಆಶೋತ್ತರ ಈಡೇರಬೇಕು ಎಂಬುದಾಗಿ ನಾನು ಪ್ರಾರ್ಥಿಸುತ್ತಿದ್ದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದರ ಪರವಾಗಿ ತೀರ್ಪು ಪ್ರಕಟವಾಗುವ ಮೂಲಕ ನಮ್ಮ ಪ್ರಾರ್ಥನೆಗೆ ಪ್ರತಿಫಲ ಸಿಕ್ಕಿತ್ತು’ ಎಂದೂ ಹೇಳಿದರು.
ಅನಾವರಣ: ಶ್ರೀಕೃಷ್ಣನ ಶಂಖಕ್ಕೆ ಸಮರ್ಪಣೆ ಉದ್ದೇಶದಿಂದ ನಿರ್ಮಿಸಲಾಗಿರುವ ‘ಪಾಂಚಜನ್ಯ’ ಸ್ಮಾರಕವನ್ನು ಕೂಡ ಮೋದಿ ಇದೇ ಸಂದರ್ಭದಲ್ಲಿ ಅನಾವರಣಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.