ನವದೆಹಲಿ: ಗುರುಗ್ರಾಮದ ಖಾಸಗಿ ಶಾಲೆಯೊಂದರಲ್ಲಿ2017ರಲ್ಲಿ ನಡೆದಿದ್ದ ಏಳು ವರ್ಷ ವಯಸ್ಸಿನ ಬಾಲಕನ ಹತ್ಯೆ ಪ್ರಕರಣದ ಆರೋಪಿಗೆ ಸುಪ್ರೀಂ ಕೋರ್ಟ್ ಗುರುವಾರ ಮಧ್ಯಂತರ ಜಾಮೀನು ನೀಡಿದೆ.
ಹತ್ಯೆ ನಡೆದಾಗ ಆರೋಪಿಯು 16 ವರ್ಷ ವಯಸ್ಸಿನವನಾಗಿದ್ದ. ಈಗ ಆತನನ್ನು ವಯಸ್ಕನೆಂದು ಪರಿಗಣಿಸಿ ಮೊಕದ್ದಮೆ ನಡೆಸಬೇಕು ಎಂದು ಬಾಲ ನ್ಯಾಯ ಮಂಡಳಿ ಆದೇಶ ನೀಡಿದ ಮೂರು ದಿನಗಳಲ್ಲಿ ಈ ಆದೇಶ ಹೊರಬಿದ್ದಿದೆ.
ಈ ಮೊಕದ್ದಮೆಯ ವಿಚಾರಣೆ ಮುಗಿಯುವವರೆಗೆ ಆರೋಪಿಯನ್ನು ಬಂಧನದಲ್ಲಿ ಇರಿಸುವುದು ಆತನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡಬಹುದು ಎಂದು ನ್ಯಾಯಮೂರ್ತಿಗಳಾದ ದಿನೇಶ್ ಮಾಹೇಶ್ವರಿ ಮತ್ತು ಜೆ.ಕೆ. ಮಹೇಶ್ವರಿ ಅವರಿದ್ದ ಪೀಠ ಹೇಳಿದೆ.
‘ಅರ್ಜಿದಾರ ಆರೋಪಿಗೆ ಮಧ್ಯಂತರ ಜಾಮೀನು ನೀಡಲಾಗಿದೆ.ಸುಪ್ರೀಂ ಕೋರ್ಟ್ನ ಮುಂದಿನ ಆದೇಶದವರೆಗೂ ಈ ಆದೇಶ ಜಾರಿಯಲ್ಲಿರಲಿದೆ. ಗುರುಗ್ರಾಮದ ಸೆಷನ್ಸ್ ನ್ಯಾಯಾಧೀಶರು ಷರತ್ತುಗಳನ್ನು ವಿಧಿಸಬಹುದು. ಸೆಷನ್ಸ್ ನ್ಯಾಯಾಧೀಶರು ನೇಮಿಸುವ ಮೇಲ್ವಿಚಾರಣಾಧಿಕಾರಿಯ ಮೇಲ್ವಿಚಾರಣೆಯಲ್ಲಿ ಆರೋಪಿ ಇರಬೇಕು. ಆರೋಪಿ ಮತ್ತು ಆತನ ಪೋಷಕರು ವಿಚಾರಣೆಗೆ ಅಡಚಣೆ ಮಾಡಬಾರದು’ ಎಂದು ಪೀಠ ಹೇಳಿದೆ.
ಅರ್ಜಿದಾರರಿಂದ ವಿಚಾರಣೆಗೆ ತೊಂದರೆಯಾದರೆ ಮೇಲ್ವಿಚಾರಣಾಧಿಕಾರಿಯು ಸೆಷನ್ಸ್ ನ್ಯಾಯಾಧೀಶರಿಗೆ ವರದಿ ಮಾಡಲು ಮುಕ್ತರಿರುತ್ತಾರೆ. ಆ ವರದಿಯನ್ನು ನ್ಯಾಯಾಧೀಶರು ಸುಪ್ರೀಂ ಕೋರ್ಟ್ಗೆ ಸಲ್ಲಿಸಲಿದ್ದಾರೆ ಎಂದು ಪೀಠ ಹೇಳಿದೆ.ಮೊಕದ್ದಮೆಯ ಮುಂದಿನ ವಿಚಾರಣೆಯನ್ನು 2023ರ ಜನವರಿಗೆ ಕೋರ್ಟ್ ನಿಗದಿಪಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.