ADVERTISEMENT

ಚಿದಂಬರಂಗೆ ಜಾಮೀನು: ಕಾಂಗ್ರೆಸ್‌ ಸಂತಸ, ಬಿಜೆಪಿ ಟೀಕೆ

ಕೊನೆಗೂ ಸತ್ಯ ಗೆದ್ದಿದೆ ಎಂದ ಸಿಂಘ್ವಿ

ಪಿಟಿಐ
Published 4 ಡಿಸೆಂಬರ್ 2019, 18:47 IST
Last Updated 4 ಡಿಸೆಂಬರ್ 2019, 18:47 IST
ತಿಹಾರ್‌ ಜೈಲಿನಿಂದ ಬುಧವಾರ ಹೊರಬಂದ ಪಿ.ಚಿದಂಬರಂ ಅವರಿಗೆ ಕಾಂಗ್ರೆಸ್‌ ಕಾರ್ಯಕರ್ತರು ಭವ್ಯ ಸ್ವಾಗತ ಕೋರಿದರು ಪಿಟಿಐ ಚಿತ್ರ
ತಿಹಾರ್‌ ಜೈಲಿನಿಂದ ಬುಧವಾರ ಹೊರಬಂದ ಪಿ.ಚಿದಂಬರಂ ಅವರಿಗೆ ಕಾಂಗ್ರೆಸ್‌ ಕಾರ್ಯಕರ್ತರು ಭವ್ಯ ಸ್ವಾಗತ ಕೋರಿದರು ಪಿಟಿಐ ಚಿತ್ರ   

ನವದೆಹಲಿ: ಪಕ್ಷದ ಮುಖಂಡ ಪಿ. ಚಿದಂಬರಂ ಅವರಿಗೆ ಜಾಮೀನು ಲಭಿಸಿರುವುದಕ್ಕೆ ಕಾಂಗ್ರೆಸ್‌ ನಾಯಕರು ಸಂತಸ ವ್ಯಕ್ತಪಡಿಸಿದ್ದಾರೆ.

ಲೋಕಸಭೆಯಲ್ಲಿ ಬುಧವಾರ ಈ ವಿಚಾರ ಪ್ರಸ್ತಾಪಿಸಿದ ಕಾಂಗ್ರೆಸ್‌ ನಾಯಕ ಅಧಿರ್‌ ರಂಜನ್‌ ಚೌಧರಿ, ‘ಸರ್ಕಾರದ ಸೂಚನೆಯ ಮೇಲೆ ಅಧಿಕಾರಿಗಳು ಚಿದಂಬರಂ ಅವರ ಮನೆಯ ಕಾಪೌಂಡ್‌ ಹಾರಿ ಹೋಗಿ ಅವರನ್ನು ಬಂಧಿಸಿ
ದ್ದರು. ಒಸಾಮಾ ಬಿನ್‌ ಲಾಡೆನ್‌ನ ಸಂಬಂಧಿಯೋ ಎಂಬಂತೆ ಅವರ ಜತೆ ವ್ಯವಹರಿಸಲಾಗಿತ್ತು. ಹಿರಿಯ ನಾಯಕರೊಬ್ಬರ ವಿರುದ್ಧದ ಇಂಥ ವರ್ತನೆ ಸರಿಯಲ್ಲ’ ಎಂದರು.

‘ಚಿದಂಬರಂ ವಿರುದ್ಧ ಸರ್ಕಾರವು ದ್ವೇಷ ರಾಜಕಾರಣವನ್ನು ಮಾಡುತ್ತಿದೆ. ಇದು ನಮ್ಮ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ’ ಎಂದು ಹೇಳಿದರು.

ADVERTISEMENT

‘ಚಿದಂಬರಂ ವಿರುದ್ಧ ಸರ್ಕಾರ ಪ್ರತೀಕಾರದ ರಾಜಕಾರಣ ಮಾಡಿತ್ತು. ಅವರಿಗೆ ಜಾಮೀನು ಲಭಿಸಿರುವುದರಿಂದ ಸಂತಸವಾಗಿದೆ. ತನಿಖೆಯನ್ನು ಸಮರ್ಥವಾಗಿ ಎದುರಿಸಿ, ತಾನು ನಿರಪರಾಧಿ ಎಂಬುದನ್ನು ಅವರು ಸಾಬೀತುಪಡಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ.

‘ಸುದೀರ್ಘವಾದ ಸುರಂಗದ ಕೊನೆಯಲ್ಲಿ ಅತ್ಯುತ್ತಮ ಬೆಳಕು ಕಾಣಿಸಿದೆ’ ಎಂದು ಚಿದಂಬರಂ ಅವರ ವಕೀಲ, ಕಾಂಗ್ರೆಸ್‌ ಮುಖಂಡ ಅಭಿಷೇಕ್‌ ಮನು ಸಿಂಘ್ವಿ ಹೇಳಿದ್ದಾರೆ.

‘ನ್ಯಾಯ ವಿಳಂಬವಾರದೆ, ನ್ಯಾಯವನ್ನು ನಿರಾಕರಿಸಿದಂತೆ. ಚಿದಂಬರಂ ಅವರಿಗೆ ಹಿಂದೆಯೇ ಜಾಮೀನು ಲಭಿಸ
ಬೇಕಿತ್ತು’ ಎಂದು ಶಶಿ ತರೂರ್‌ ಹೇಳಿದ್ದಾರೆ. ‘ಓಹ್‌! ಕೊನೆಗೂ... 106 ದಿನಗಳ ನಂತರ...’ ಎಂದು ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಟ್ವೀಟ್‌ ಮಾಡಿದ್ದಾರೆ.

‘ಜಾಮೀನು ಕ್ಲಬ್‌’ಗೆ ಹೊಸ ಸೇರ್ಪಡೆ’

ಚಿದಂಬರಂ ಅವರಿಗೆ ಜಾಮೀನು ಲಭಿಸಿದ್ದಕ್ಕೆ ಕಾಂಗ್ರೆಸ್‌ ಪಕ್ಷದ ನಾಯಕರು ಸಂಭ್ರಮಿಸುತ್ತಿರುವುದನ್ನು ಟೀಕಿಸಿದ ಬಿಜೆಪಿ, ‘ಭ್ರಷ್ಟತೆಯನ್ನು ಕಾಂಗ್ರೆಸ್‌ ಹೇಗೆ ಆಚರಿಸುತ್ತದೆ ಎಂಬುದಕ್ಕೆ ಇದು ಅತ್ಯುತ್ತಮ ನಿದರ್ಶನ’ ಎಂದಿದೆ.

‘ಜಾಮೀನಿನ ಮೇಲೆ ಹೊರಗಿರುವ ಕಾಂಗ್ರೆಸ್ಸಿಗರ ಕ್ಲಬ್‌’ಗೆ ಚಿದಂಬರಂ ಸೇರ್ಪಡೆಯಾಗಿದ್ದಾರೆ. ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ರಾಬರ್ಟ್‌ ವಾದ್ರಾ, ಮೋತಿಲಾಲ್‌ ವೋರಾ, ಭೂಪಿಂದರ್‌ ಹೂಡಾ, ಶಶಿ ತರೂರ್‌ ಈಗಾಗಲೇ ಈ ಕ್ಲಬ್‌ನ ಸದಸ್ಯರಾಗಿದ್ದಾರೆ’ ಎಂದು ಬಿಜೆಪಿಯ ವಕ್ತಾರ ಸಂಬಿತ್‌ ಪಾತ್ರಾ ಟ್ವೀಟ್‌ ಮಾಡಿದ್ದಾರೆ.

ಬಂಧನ– ಜಾಮೀನು

* ಆಗಸ್ಟ್‌ 21, 2019: ಐಎನ್‌ಎಕ್ಸ್‌ ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಚಿದಂಬರಂ ಅವರ ಬಂಧನ

* ಅಕ್ಟೋಬರ್‌ 16: ಹಣದ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಪ್ರತ್ಯೇಕ ಪ್ರಕರಣ ದಾಖಲು, ಬಂಧನ

* ಅಕ್ಟೋಬರ್‌ 22: ಐಎನ್‌ಎಕ್ಸ್‌ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಮಂಜೂರು

* ಡಿ. 4: ಹಣದ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಮಂಜೂರು

***

ತೀರ್ಪಿನಿಂದ ಖುಷಿಯಾಗಿದೆ. ಆರೋಗ್ಯ ಸ್ವಲ್ಪ ಚೇತರಿಸಿದ ಬಳಿಕ ಚಿದಂಬರಂ ಅವರು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳುವರು

-ನಳಿನಿ, ಚಿದಂಬರಂ ಅವರ ಪತ್ನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.