ಚಂಡೀಗಢ: ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.
'ಇಂದು ನಾನು ಕೊರೊನಾ ವೈರಸ್ ಸೋಂಕು ಪರೀಕ್ಷೆಗೆ ಒಳಗಾದೆ ಹಾಗೂ ಪರೀಕ್ಷೆ ವರದಿ ಪಾಸಿಟಿವ್ ಬಂದಿದೆ. ಕಳೆದ ವಾರದಿಂದ ನನ್ನ ಸಂಪರ್ಕಕ್ಕೆ ಬಂದಿರುವ ಎಲ್ಲರೂ ತಾವಾಗಿಯೇ ಪರೀಕ್ಷೆಗೆ ಒಳಗಾಗಿ. ಹಾಗೇ ನನ್ನೊಂದಿಗೆ ಹತ್ತಿರದ ಸಂಪರ್ಕದಲ್ಲಿದ್ದವರು ಕೂಡಲೇ ಕ್ವಾರಂಟೈನ್ಗೆ ಒಳಗಾಗುವಂತೆ ಕೋರುತ್ತೇನೆ' ಎಂದು ಸಿಎಂ ಮನೋಹರ್ ಲಾಲ್ ಟ್ವೀಟಿಸಿದ್ದಾರೆ.
ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರೊಂದಿಗೆ ನವದೆಹಲಿಯಲ್ಲಿ ಆರು ದಿನಗಳ ಹಿಂದೆ ಸಿಎಂ ಮನೋಹರ್ ಲಾಲ್ ಅವರು ಸಭೆಯೊಂದರಲ್ಲಿ ಭಾಗಿಯಾಗಿದ್ದರು. ಗಜೇಂದ್ರ ಸಿಂಗ್ ಅವರಿಗೂ ಈಗಾಗಲೇ ಕೋವಿಡ್ ದೃಢಪಟ್ಟಿದೆ.
ಮನೋಹರ್ ಲಾಲ್ ಅವರಿಗೆ ಗುರುವಾರ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿತ್ತು. ಆದರೆ, ಮುಂಜಾಗ್ರತೆ ಕ್ರಮವಾಗಿ ಅವರು ಮೂರು ದಿನಗಳು ಮನೆಯಲ್ಲಿಯೇ ಕ್ವಾರಂಟೈನ್ಗೆ ಒಳಗಾಗಿದ್ದರು.
ಹರಿಯಾಣದ ವಿಧಾನಸಭೆ ಸ್ಪೀಕರ್ ಜ್ಞಾನ ಚಂದ್ ಗುಪ್ತ ಹಾಗೂ ಇಬ್ಬರು ಬಿಜೆಪಿ ಎಂಎಲ್ಎಗಳಿಗೂ ಸೋಮವಾರ ಕೋವಿಡ್ ದೃಢಪಟ್ಟಿದೆ. ಮುಂಗಾರು ಅಧಿವೇಶನ ಶುರುವಾಗಲು ಇನ್ನು ಎರಡು ದಿನ ಬಾಕಿ ಇರುವಂತೆ ರಾಜ್ಯದ ಮುಖ್ಯಮಂತ್ರಿ ಹಾಗೂ ಸ್ಪೀಕರ್ ಇಬ್ಬರೂ ಕೊರೊನಾ ಸೋಂಕಿತರಾಗಿರುವುದು ದೃಢಪಟ್ಟಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.