ಚಂಡಿಗಡ (ಪಿಟಿಐ): ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಮಾಡಿದ್ದನ್ನು ಪ್ರಾಸಂಗಿಕವಾಗಿ ಉಲ್ಲೇಖಿಸಿ ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ನೀಡಿದ್ದ ಹೇಳಿಕೆ ವಿವಾದ ಸೃಷ್ಟಿಸಿದೆ.
‘ಇನ್ನುಮುಂದೆ ಕಾಶ್ಮೀರದಿಂದ ಹೆಣ್ಣು ತರಬಹುದು ಎಂದು ಹರಿಯಾಣದ ಜನ ಮಾತನಾಡುತ್ತಿದ್ದಾರೆ’ ಎಂದು ಖಟ್ಟರ್ ಹೇಳಿದ್ದಾರೆ.
ಫತೇಹಾಬಾದ್ನಲ್ಲಿ ಮಾತನಾಡಿದ ಖಟ್ಟರ್, ‘ಲಿಂಗಾನುಪಾತದಲ್ಲಿ ವ್ಯತ್ಯಾಸವಿದ್ದರೆ ಬಿಹಾರದ ಯುವತಿಯರನ್ನು ಕರೆತಂದು ವಿವಾಹವಾಗಬಹುದು ಎಂದು ಸಚಿವ ಧನಕರ್ ಹೇಳುತ್ತಿದ್ದರು. ಆದರೆ ಈಗ ಕಾಶ್ಮೀರವೂ ಮುಕ್ತವಾಗಿದೆ. ಅಲ್ಲಿಯ ಯುವತಿಯರನ್ನು ವಿವಾಹವಾಗಬಹುದು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ತಮಾಷೆ ಏನೇ ಇರಲಿ, ಲಿಂಗಾನುಪಾತ ಸರಿಯಾಗಿದ್ದರೆ, ಸಮಾಜವೂಸಮತೋಲನದಲ್ಲಿರುತ್ತದೆ’ ಎಂದು ಖಟ್ಟರ್ ಹೇಳಿದ್ದಾರೆ.
ಟೀಕೆ: ‘ಅಧಿಕಾರದ ಉನ್ನತ ಸ್ಥಾನದಲ್ಲಿ ಇರುವವರು ಜಮ್ಮು ಕಾಶ್ಮೀರದ ಜನರ ಬಗ್ಗೆ ಸೂಕ್ಷ್ಮ ಸಂವೇದನೆಯಿಲ್ಲದ ಹೇಳಿಕೆ ನೀಡುವುದು ಸರಿಯಲ್ಲ. ಇಂಥ ಹೇಳಿಕೆ ಕಾಶ್ಮೀರದ ಜನರಷ್ಟೇ ಅಲ್ಲ ಇಡೀ ದೇಶದ ಜನರ ಭಾವನೆಗಳನ್ನು ಗಾಸಿಗೊಳಿಸುತ್ತದೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
‘ಖಟ್ಟರ್ ಹೇಳಿಕೆ ತುಚ್ಛವಾಗಿದೆ. ಮಹಿಳೆಯರ ಮೇಲೆ ಪುರುಷರ ಹಕ್ಕು ಪ್ರತಿಪಾದಿಸುವುದು ತಪ್ಪು’ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ. ಆದರೆ ‘ಇಂತಹ ವಿಕೃತ ಸುದ್ದಿಗಳಿಗೆ ಪ್ರತಿಕ್ರಿಯಿಸಬೇಡಿ’ ಎಂದು ಖಟ್ಟರ್ ಅವರು ರಾಹುಲ್ಗೆ ಸಲಹೆ ನೀಡಿದ್ದಾರೆ.
‘ಹೆಣ್ಣುಮಕ್ಕಳು ನಮ್ಮ ಹೆಮ್ಮೆ. ದೇಶದ ಪ್ರತಿಯೊಂದು ಹೆಣ್ಣುಮಗುವೂ ನಮ್ಮ ಹೆಣ್ಣುಮಗುವೇ.ಮಾಧ್ಯಮಗಳು ಸತ್ಯವನ್ನು ಮರೆಮಾಚುತ್ತಿವೆ’ ಎಂದಿದ್ದಾರೆ.
ಖಟ್ಟರ್ ಅವರಿಂದ ವಿವರಣೆ ಕೇಳುವುದಾಗಿ ರಾಷ್ಟ್ರೀಯ ಮಹಿಳಾ ಆಯೋಗ ಹೇಳಿದೆ. ಖಟ್ಟರ್ ವಿರುದ್ಧ ಎಫ್ಐಆರ್ ದಾಖಲಿಸಲು ದೆಹಲಿ ಮಹಿಳಾ ಆಯೋಗ ಒತ್ತಾಯಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.