ADVERTISEMENT

ಚೀನಾ ಲಡಾಖ್‌‌ನ ಭೂಭಾಗ ಅತಿಕ್ರಮಿಸಿದೆಯೇ: ರಾಹುಲ್ ಗಾಂಧಿ ಪ್ರಶ್ನೆ

ಪಿಟಿಐ
Published 9 ಜೂನ್ 2020, 12:21 IST
Last Updated 9 ಜೂನ್ 2020, 12:21 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ: ‘ಗಡಿಯ ವಾಸ್ತವ ಸ್ಥಿತಿ ಎಲ್ಲರಿಗೂ ತಿಳಿದಿದೆ’ ಎಂಬ ಬಿಜೆಪಿ ಮೂದಲಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು,‘ಲಡಾಖ್‌‌‌ನಲ್ಲಿ ಭಾರತದ ಭೂಭಾಗವನ್ನು ಚೀನಾ ಆಕ್ರಮಿಸಿಕೊಂಡಿದೆಯೇ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಮಂಗಳವಾರ ಪ್ರಶ್ನಿಸಿದ್ದಾರೆ.

‘ರಕ್ಷಣಾ ಸಚಿವರು ‘ಕೈ’ ಚಿಹ್ನೆಯ ಬಗ್ಗೆ ಪ್ರತಿಕ್ರಿಯಿಸಿದ ಬಳಿಕ ಗಡಿ ಸ್ಥಿತಿಯ ಕುರಿತು ಉತ್ತರಿಸಬಹುದೇ? ಎಂದು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.

ಖ್ಯಾತ ಉರ್ದು ಕವಿ ಮಿರ್ಜಾ ಗಾಲಿಬ್ ಅವರ ಕವನದ ಸಾಲುಗಳನ್ನು ಬಳಸಿಕೊಂಡು ರಾಹುಲ್ ಗಾಂಧಿ ವಿರುದ್ಧ ರಾಜನಾಥ್ಸೋಮವಾರ ವಾಗ್ದಾಳಿ ನಡೆಸಿದ್ದರು. ‘ಕೈಗೆ ನೋವಾಗಿದ್ದರೆ ಮುಲಾಮು ಹಚ್ಚಬಹುದು. ಆದರೆ ‘ಕೈ‘ಯೇ ದೊಡ್ಡ ನೋವಾಗಿ ಪರಿಣಮಿಸಿದರೆ ಏನು ಮಾಡುವುದು‘ ಎಂದು ಜರಿದಿದ್ದರು.

ADVERTISEMENT

‘ಕೈ’ ಕಾಂಗ್ರೆಸ್ ಪಕ್ಷದ ಚಿಹ್ನೆ

ರಾಹುಲ್ ಗಾಂಧಿ ಹಾಗೂ ರಾಜನಾಥ್ ಸಿಂಗ್ ಅವರು ಸೋಮವಾರ ಸಂಜೆಯಿಂದ ಟ್ವಿಟರ್‌ನಲ್ಲಿ ಮಾತಿನ ಚಕಮಕಿ ನಡೆಸುತ್ತಿದ್ದು, ಇದಕ್ಕಾಗಿ ಗಾಲಿಬ್ ಅವರ ಕವನದ ಸಾಲುಗಳನ್ನು ಬಳಸಿಕೊಳ್ಳುತ್ತಿದ್ದಾರೆ.

ಗಡಿಗಳನ್ನು ಸಂರಕ್ಷಿಸಿಕೊಳ್ಳುವಲ್ಲಿ ಭಾರತ ಸಮರ್ಥವಾಗಿವೆ ಎಂದು ಗೃಹಸಚಿವ ಅಮಿತ್ ಶಾ ಅವರು ಟ್ವೀಟ್ ಮಾಡಿದ್ದರು. ಇದನ್ನೂ ಗಾಲಿಬ್ ಪದಗಳಲ್ಲಿ ಹೇಳಿದ್ದರು. ‘ಗಡಿಗಳ ವಾಸ್ತವವನ್ನು ಎಲ್ಲರೂ ತಿಳಿದಿದ್ದಾರೆ. ಆದರೆ ಒಬ್ಬರ ಮನಸ್ಸನ್ನು ಸಂತಸದಿಂದ ಇರಿಸುವ ನಿಟ್ಟಿನಲ್ಲಿ ಆಲೋಚಿಸಬೇಕಾಗುತ್ತದೆ’ ಎಂದು ಟ್ವೀಟ್ ಮಾಡಿದ್ದರು.

ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಅವರು ಪಕ್ಷದ ಚಿಹ್ನೆಯನ್ನು ಲೇವಡಿ ಮಾಡಿದ್ದಕ್ಕೆ ರಾಜನಾಥ್ ವಿರುದ್ಧ ಹರಿಹಾಯ್ದಿದ್ದಾರೆ. ‘ಭಾರತದ ಸಮರ್ಥನೆ ಎಂದರೆಪಕ್ಷವೊಂದರ ಚಿಹ್ನೆಯನ್ನು ನಿರಾಕರಿಸುವುದು ಎಂದಲ್ಲ’ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಎತ್ತಿರುವ ಪ್ರಶ್ನೆಗೆ ರಾಜನಾಥ್ ಉತ್ತರಿಸಬೇಕು ಎಂದುಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.