ADVERTISEMENT

ಮೂವರು ಅಪರಾಧಿಗಳ ಮರಣದಂಡನೆ ಜೀವಾವಧಿ ಶಿಕ್ಷೆಗೆ: ಬಾಂಬೆ ಹೈಕೋರ್ಟ್‌ ಆದೇಶ

2013ರಲ್ಲಿ ಮುಂಬೈನ ಶಕ್ತಿ ಮಿಲ್ಸ್‌ ಆವರಣದಲ್ಲಿ ಫೋಟೊಜರ್ನಲಿಸ್ಟ್‌ ಮೇಲೆ ಗ್ಯಾಂಗ್‌ರೇಪ್‌ ಪ್ರಕರಣ

ಪಿಟಿಐ
Published 25 ನವೆಂಬರ್ 2021, 8:34 IST
Last Updated 25 ನವೆಂಬರ್ 2021, 8:34 IST
court
court   

ಮುಂಬೈ: ಮುಂಬೈನಲ್ಲಿ ಫೋಟೊ ಜರ್ನಲಿಸ್ಟ್‌ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಮೂವರು ಅಪರಾಧಿಗಳಿಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿ ಬಾಂಬೆ ಹೈಕೋರ್ಟ್‌ ಗುರುವಾರ ಆದೇಶಿಸಿತು.

ಅರ್ಜಿ ವಿಚಾರಣೆ ನಡೆಸಿದ, ನ್ಯಾಯಮೂರ್ತಿಗಳಾದ ಸಾಧನಾ ಜಾಧವ್‌ ಹಾಗೂ ಪೃಥ್ವಿರಾಜ್‌ ಚವಾಣ್‌ ಅವರಿದ್ದ ವಿಭಾಗೀಯ ನ್ಯಾಯಪೀಠ, ‘ಅಪರಾಧಿಗಳು ತಾವು ಎಸಗಿದ ಕೃತ್ಯಕ್ಕಾಗಿ ಬದುಕಿರುವವರೆಗೆ ಪಶ್ಚಾತ್ತಾಪ ಪಡಬೇಕು’ ಎಂದು ಹೇಳಿತು.

ವಿಜಯ್ ಜಾಧವ್, ಮೊಹಮ್ಮದ್‌ ಕಾಸಿಮ್ ಶೇಖ್‌ ಹಾಗೂ ಮೊಹಮ್ಮದ್‌ ಅನ್ಸಾರಿ ಅಪರಾಧಿಗಳು.

ADVERTISEMENT

‘ಅತ್ಯಾಚಾರ ಎಂಬುದು ಮಾನವ ಹಕ್ಕುಗಳ ಉಲ್ಲಂಘನೆ. ಈ ಮೂವರು ಎಸಗಿದ ಕೃತ್ಯ ಸಮಾಜದ ಆತ್ಮಸಾಕ್ಷಿಯನ್ನೇ ಅಲುಗಾಡಿಸಿತ್ತು. ಆದರೆ, ಅಪರಾಧಿಗಳನ್ನು ಗಲ್ಲಿಗೇರಿಸಿದರೆ ಅದು ಪಶ್ಚಾತ್ತಾಪ ಪಡುವ ಅವಕಾಶಕ್ಕೆ ಅಂತ್ಯ ಹಾಡಿದಂತೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಮುಂಬೈನಲ್ಲಿರುವ ಶಕ್ತಿ ಮಿಲ್ಸ್‌ನ ಆವರಣದಲ್ಲಿ 2013ರ ಆಗಸ್ಟ್‌ 22ರಂದು ಈ ಮೂವರು, 22 ವರ್ಷದ ಫೋಟೊ ಜರ್ನಲಿಸ್ಟ್‌ ಮೇಲೆ ಅತ್ಯಾಚಾರ ಎಸಗಿದ್ದರು.

ವಿಚಾರಣಾ ಕೋರ್ಟ್‌ ಈ ಮೂವರು ಅಪರಾಧಿಗಳಿಗೆ ಮರಣದಂಡನೆ ವಿಧಿಸಿ 2014ರ ಮಾರ್ಚ್‌ನಲ್ಲಿ ಆದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.