ADVERTISEMENT

ಪುಸ್ತಕದೊಂದಿಗೆ ಪರೀಕ್ಷೆ ನಿರ್ಧಾರ: ಮಧ್ಯಪ್ರವೇಶಿಸಲು ಹೈಕೋರ್ಟ್ ನಕಾರ

ಪಿಟಿಐ
Published 10 ಜೂನ್ 2020, 11:33 IST
Last Updated 10 ಜೂನ್ 2020, 11:33 IST
ದೆಹಲಿ ಹೈಕೋರ್ಟ್
ದೆಹಲಿ ಹೈಕೋರ್ಟ್    

ನವದೆಹಲಿ: ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪುಸ್ತಕದೊಂದಿಗೆ ಪರೀಕ್ಷೆ (ಓಪನ್ ಬುಕ್ ಎಕ್ಸಾಂ) ನಡೆಸುವ ದೆಹಲಿ ವಿಶ್ವವಿದ್ಯಾಲಯದ ನಿರ್ಧಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಬುಧವಾರ ಸ್ಪಷ್ಟಪಡಿಸಿದೆ. ಅಂಗವಿಕಲ ವಿದ್ಯಾರ್ಥಿಗಳೂ ಪರೀಕ್ಷೆ ತೆಗೆದುಕೊಳ್ಳಲು ಸಾಧ್ಯವಾಗುವಂತಹ ಪರಿಹಾರ ರೂಪಿಸುವಂತೆ ಕೇಂದ್ರ ಸರ್ಕಾರ, ವಿಶ್ವವಿದ್ಯಾಲಯ ಹಾಗೂ ಯುಜಿಸಿಗೆ ಸೂಚಿಸಿದೆ.

ಅಂಗವಿಕಲ ವಿದ್ಯಾರ್ಥಿ ಪ್ರತಿನಿಧಿಗಳ ಜತೆ ಮಾತನಾಡಿ, ಜೂನ್ 11ರೊಳಗೆ ಪರಿಹಾರ ರೂಪಿಸುವಂತೆ ನ್ಯಾಯಮೂರ್ತಿಗಳಾದ ರಾಜೀವ್ ಸಹಾಯ್ ಹಾಗೂ ಆಶಾ ಮೆನನ್ ಅವರ ಪೀಠ ಸೂಚಿಸಿತು. ಜುಲೈ 1ರಿಂದ ಪರೀಕ್ಷೆಗಳು ನಿಗದಿಯಾಗಿದ್ದು, ಉಳಿದೆಲ್ಲ ವಿದ್ಯಾರ್ಥಿಗಳು ಪುಸ್ತಕದೊಂದಿಗೆ ಪರೀಕ್ಷೆ ಎದುರಿಸಲು ಸಜ್ಜಾಗಬೇಕು ಎಂದೂ ತಿಳಿಸಿತು.

ಪುಸ್ತಕದೊಂದಿಗೆ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಮತ್ತೊಂದು ಪ್ರತ್ಯೇಕ ಪ್ರಶ್ನೆಪತ್ರಿಕೆ ಪ್ರತಿಯನ್ನು ಸಿದ್ಧವಾಗಿಟ್ಟುಕೊಳ್ಳಬೇಕು ಎಂದು ಪೀಠ ಸೂಚಿಸಿತು.

ADVERTISEMENT

ಪುಸ್ತಕದ ಜತೆ ಪರೀಕ್ಷೆ ಬರೆಯುವ ದೆಹಲಿ ವಿಶ್ವವಿದ್ಯಾಲಯದ ನಿರ್ಧಾರ ಪ್ರಶ್ನಿಸಿ ರಾಷ್ಟ್ರೀಯ ಅಂಧರ ಫೆಡರೇಷನ್ ಅರ್ಜಿ ಸಲ್ಲಿಸಿತ್ತು. ವಿಶ್ವವಿದ್ಯಾಲಯದ ಈ ನಿರ್ಧಾರದಿಂದ ಕಣ್ಣಿನ ದೋಷವುಳ್ಳ ವಿದ್ಯಾರ್ಥಿಗಳ ಹಕ್ಕುಗಳ ಉಲ್ಲಂಘನೆ ಆಗುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಹಿಂದಿನ ವರ್ಷಗಳ ಫಲಿತಾಂಶ ಆಧರಿಸಿ ಅಂತಿಮ ವರ್ಷದ ಕಾರ್ಯಕ್ಷಮತೆಯನ್ನು ನಿರ್ಣಯಿಸಬೇಕು ಎಂದು ಮನವಿ ಮಾಡಲಾಗಿತ್ತು. ಕಾಲೇಜುಗಳು ಪುನರಾರಂಭಗೊಂಡ ಬಳಿಕ ಆಫ್‌ಲೈನ್ ಪರೀಕ್ಷೆಗಳನ್ನು ನಡೆಸುವಂತೆಯೂ ಫೆಡರೇಷನ್ ಸಲಹೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.