ನವದೆಹಲಿ: ಮಾಜಿ ರಾಜತಾಂತ್ರಿಕ ಅಧಿಕಾರಿ ಲಕ್ಷ್ಮಿ ಮುರ್ಡೇಶ್ವರ ಪುರಿ ಅವರ ವಿರುದ್ಧದ ನಿಂದನಾತ್ಮಕ ಟ್ವೀಟ್ಗಳನ್ನು ತೆಗೆದು ಹಾಕುವಂತೆ ದೆಹಲಿ ಹೈಕೋರ್ಟ್ ಮಂಗಳವಾರ ಹೋರಾಟಗಾರ ಸಾಕೇತ್ ಗೋಖಲೆ ಅವರಿಗೆ ನಿರ್ದೇಶಿಸಿತು.
ಈ ಕುರಿತು ಮಧ್ಯಂತರ ಆದೇಶ ನೀಡಿರುವ ನ್ಯಾಯಮೂರ್ತಿ ಸಿ. ಹರಿಶಂಕರ್ ಅವರು, ನ್ಯಾಯಾಲಯದಲ್ಲಿ ಗೋಖಲೆ ವಿರುದ್ಧ ಮಾನಹಾನಿ ಪ್ರಕರಣ ಬಾಕಿ ಇರುವ ಹಿನ್ನೆಲೆಯಲ್ಲಿ, ಲಕ್ಷ್ಮಿ ಪುರಿ ಮತ್ತು ಅವರ ಪತಿ ಕೇಂದ್ರ ಸಚಿವ ಹರದೀಪ್ ಸಿಂಗ್ ಪುರಿ ವಿರುದ್ಧ ನಿಂದನಾತ್ಮಕ ಟ್ವೀಟ್ಗಳನ್ನು ಪೋಸ್ಟ್ ಮಾಡುವುದಕ್ಕೆ ತಡೆ ನೀಡಿದ್ದಾರೆ.
ಈಆದೇಶ ಜಾರಿಯಾದ 24 ಗಂಟೆಗಳ ಒಳಗೆ ಗೋಖಲೆ ಟ್ವೀಟ್ಗಳನ್ನು ಅಳಿಸಲು ವಿಫಲವಾದರೆ, ಟ್ವಿಟರ್ ಯುಆರ್ಎಲ್ಗಳನ್ನು ಗುರುತಿಸಿ, ಅವರ ವಿರುದ್ಧ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿದೆ.
'ಗೋಖಲೆ ಅವರು, ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಸುಳ್ಳು ಮತ್ತು ತಪ್ಪಾದ, ಮಾನಹಾನಿಕರವಾದ ಮಾಹಿತಿಗಳನ್ನು ಟ್ವೀಟ್ ಮಾಡಿದ್ದಾರೆ’ ಎಂದು ಆರೋಪಿಸಿ ಲಕ್ಷ್ಮಿ ಪುರಿ ಅವರು,ಗೋಖಲೆ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ₹5 ಕೋಟಿ ನಷ್ಟ ಪರಿಹಾರ ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಮೊಕದ್ದಮೆ ಆಧರಿಸಿ, ನ್ಯಾಯಾಲಯ ಮಧ್ಯಂತರ ಆದೇಶ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.