ನವದೆಹಲಿ (ಪಿಟಿಐ): ಅಗತ್ಯ ರಕ್ಷಣಾ ಸೇವೆಗಳಲ್ಲಿ ಮುಷ್ಕರ ನಿರ್ಬಂಧಿಸಲು ಅವಕಾಶ ಕಲ್ಪಿಸುವ ‘ಅಗತ್ಯವಸ್ತುಗಳ ರಕ್ಷಣಾ ಸೇವೆ ಕಾಯ್ದೆ 2021’ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಟೇಲ್ ಮತ್ತು ನ್ಯಾಯಮೂರ್ತಿ ಅಮಿತ್ ಬನ್ಸಲ್ ಅವರಿದ್ದ ಪೀಠವು ಈ ಸಂಬಂಧ ರಕ್ಷಣಾ ಸಚಿವಾಲಯ ಮತ್ತು ಕಾನೂನು ಸಚಿವಾಲಯಕ್ಕೆ ನೋಟಿಸ್ ಜಾರಿ ಮಾಡಿತು.
ಕಾಯ್ದೆಯ ಹಲವು ಅಂಶಗಳನ್ನು ಪ್ರಶ್ನಿಸಿದ್ದ ಅರ್ಜಿದಾರರು, ಇದು ಸಂಬಂಧಿತ ಆಡಳಿತಗಳಿಗೆ ಯಾವುದೇ ಸಂಸ್ಥೆಯನ್ನು ‘ಅಗತ್ಯ ರಕ್ಷಣಾ ಸೇವೆ’ ಎಂದು ಘೋಷಿಸಲು, ಮುಷ್ಕರದಲ್ಲಿ ಭಾಗವಹಿಸುವಿಕೆಯನ್ನು ನಿರ್ಬಂಧಿಸಲು ಅವಕಾಶ ಕಲ್ಪಿಸಲಿದೆ ಎಂದಿದ್ದರು.
ಸುಮಾರು 400 ನೋಂದಾಯಿತ ಕಾರ್ಮಿಕ ಸಂಘಟನೆಗಳನ್ನು ಒಳಗೊಂಡ ಅಖಿಲ ಭಾರತ ರಕ್ಷಣಾ ಸಿಬ್ಬಂದಿಗಳ ಒಕ್ಕೂಟವು, ಜೂನ್ 30, 2021ರಿಂದ ಜಾರಿಗೆ ಬಂದಿರುವ ಕಾಯ್ದೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದೆ. ಕಾಯ್ದೆಯು ಸಂವಿಧಾನದ ವಿಧಿ 14, 19 (1), (ಎ), 19 (1) (ಸಿ), 21 ಮತ್ತು 311ರ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರ ಒಕ್ಕೂಟವು ಪ್ರತಿಪಾದಿಸಿದೆ.
ಒಕ್ಕೂಟವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಂಜಯ್ ಪಾರೀಖ್ ಅವರು, ಮುಷ್ಕರ ಎಂಬುದು ಕಾರ್ಮಿಕರಿಗೆ ಇರುವ ಒಂದು ಅಸ್ತ್ರ. ಇದನ್ನೇ ನಿರ್ಬಂಧಿಸುವುದು ಸ್ಥಾಪಿತ ಕಾನೂನು ಮತ್ತು ವ್ಯವಸ್ಥೆಗೆ ವಿರುದ್ಧವಾದುದು ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.