ADVERTISEMENT

ಇದು ಅತ್ಯಂತ ಕಷ್ಟದ ನಿರ್ಧಾರ: ಸಿಎಂ ಫಡಣವೀಸ್‌ಗೆ ಶಿವಸೇನಾ ಶಹಬ್ಬಾಸ್‌ಗಿರಿ

ಮೃತ್ಯುಂಜಯ ಬೋಸ್
Published 25 ಫೆಬ್ರುವರಿ 2025, 13:24 IST
Last Updated 25 ಫೆಬ್ರುವರಿ 2025, 13:24 IST
<div class="paragraphs"><p>ಸಂಜಯ್ ರಾವುತ್ ಮತ್ತು ದೇವೇಂದ್ರ ಫಡಣವೀಸ್</p></div>

ಸಂಜಯ್ ರಾವುತ್ ಮತ್ತು ದೇವೇಂದ್ರ ಫಡಣವೀಸ್

   

ಮುಂಬೈ: ಆಪ್ತ ಸಹಾಯಕರು(ಪಿಎ) ಮತ್ತು ವಿಶೇಷ ಕರ್ತವ್ಯಾಧಿಕಾರಿಗಳ(ಒಎಸ್‌ಡಿ) ನೇಮಕಾತಿಗೆ ಸಚಿವರುಗಳು ಸೂಚಿಸಿದ ಕೆಲ ವ್ಯಕ್ತಿಗಳ ಹೆಸರುಗಳನ್ನು ಪರಿಗಣಿಸದೆ ಇರುವ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರ ನಿರ್ಧಾರವನ್ನು ಶಿವಸೇನಾ(ಉದ್ಧವ್ ಠಾಕ್ರೆ ಬಣ) ಶ್ಲಾಘಿಸಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಸೇನಾ(ಯುಬಿಟಿ) ನಾಯಕ ಸಂಜಯ್ ರಾವುತ್, ‘ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಕೆಲವು ವ್ಯಕ್ತಿಗಳನ್ನು ಪಿಎ ಮತ್ತು ಒಎಸ್‌ಡಿಗಳಾಗಿ ನೇಮಕ ಮಾಡದೇ ಇರುವ ಸಿಎಂ ಫಡಣವೀಸ್‌ ಅವರ ನಿರ್ಧಾರವನ್ನು ನಾವು ಅಭಿನಂದಿಸುತ್ತೇವೆ. ಇದು ಅತ್ಯಂತ ಕಷ್ಟದ ನಿರ್ಧಾರವಾಗಿದೆ. ರಾಜ್ಯದ ಹಿತಾಸಕ್ತಿಗಾಗಿ ಅವರು ತೆಗೆದುಕೊಂಡಿರುವ ಈ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ’ ಎಂದರು.

ADVERTISEMENT

ಒಎಸ್‌ಡಿ ನೇಮಕಾತಿಗಾಗಿ ತಾವು ಸೂಚಿಸಿದ ಹೆಸರನ್ನು ತೆಗೆದುಕೊಳ್ಳದಿರುವುದಕ್ಕಾಗಿ ಎನ್‌ಸಿಪಿ ಅಜಿತ್ ಪವಾರ್ ಬಣದ ನಾಯಕ, ಕೃಷಿ ಸಚಿವ ಮಾಣಿಕ್‌ರಾವ್‌ ಕೊಕಟೆ ಅವರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು.

ಕೊಕಾಟೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಫಡಣವೀಸ್‌, ‘ಪಿಎ ಮತ್ತು ಒಎಸ್‌ಡಿ ನೇಮಕದ ಹಕ್ಕು ಮುಖ್ಯಮಂತ್ರಿಗಿದೆ ಎಂಬ ವಿಷಯ ಕೊಕಾಟೆ ಅವರಿಗೆ ಗೊತ್ತಿಲ್ಲದೇ ಇರಬಹುದು. ಸಚಿವರು ತಮ್ಮ ಪ್ರಸ್ತಾವನೆಯನ್ನು ಕಳುಹಿಸಬಹುದು. ಆದರೆ ಅಂತಿಮ ನಿರ್ಧಾರ ಮುಖ್ಯಮಂತ್ರಿಯದ್ದೇ ಆಗಿರುತ್ತದೆ’ ಎಂದಿದ್ದರು.

‘ನೀವು ನಿಮಗೆ ಬೇಕಾದ ಹೆಸರಗಳನ್ನು ಕಳುಹಿಸಬಹುದು ಎಂದು ಸಂಪುಟ ಸಭೆಯಲ್ಲಿ ಸ್ಪಷ್ಟವಾಗಿ ಹೇಳಿದ್ದೆ. ಆದರೆ ಅಕ್ರಮದಲ್ಲಿ ಭಾಗಿಯಾದವರ ಹೆಸರನ್ನು ನಾನು ಅನುಮೋದಿಸುವುದಿಲ್ಲ’ ಎಂದು ಫಡಣವೀಸ್ ಹೇಳಿದ್ದರು.

ತಿರಸ್ಕೃತಗೊಂಡ ಹೆಚ್ಚಿನ ಹೆಸರುಗಳು ಉಪಮುಖ್ಯಮಂತ್ರಿ ಏಕನಾಥ ಶಿಂದೆ ಪಾಳಯಕ್ಕೆ ಸೇರಿದವು ಎಂದೂ ಅವರು ತಿಳಿಸಿದ್ದರು.

ಶಿವಸೇನಾ(ಯುಬಿಟಿ) ಫಡಣವೀಸ್‌ ಅವರನ್ನು ಹೊಗಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ನಕ್ಸಲ್‌ ಪೀಡಿತ ಗಡ್ಚಿರೋಲಿ ಜಿಲ್ಲೆಯಲ್ಲಿ ಫಡಣವೀಸ್ ಅವರು ಹೊಸ ವರ್ಷ ಆಚರಣೆ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.