ಚೆನ್ನೈ: ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ನಿಜವಾಗಿದೆ. ಚೆನ್ನೈ ಮತ್ತು ಉತ್ತರ ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಗುರುವಾರ ಭಾರಿ ಮಳೆಯಾಗುತ್ತಿದೆ.
ಹೀಗಾಗಿ, ಮಳೆ ಹೆಚ್ಚಿರುವ ಜಿಲ್ಲೆಗಳಲ್ಲಿ ಶಾಲೆಗಳಿಗ ರಜೆ ಘೋಷಿಸಲಾಗಿದೆ.
ಯಾವುದೇ ಪರಿಸ್ಥಿತಿ ಎದುರಿಸಲು ಕೇಂದ್ರ ವಿಪತ್ತು ನಿರ್ವಹಣಾ ದಳ, ರಾಜ್ಯ ವಿಪತ್ತು ನಿರ್ವಹಣಾ ದಳ, ಅಗ್ನಿಶಾಮಕ ದಳ, ಪೊಲೀಸ್ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಸಜ್ಜಾಗಿದೆ ಎಂದು ಗ್ರೇಟರ್ ಚೆನ್ನೈ ಕಾರ್ಪೊರೇಶನ್(ಜಿಸಿಸಿ) ತಿಳಿಸಿದೆ.
ತಗ್ಗುಪ್ರದೇಶದಲ್ಲಿ ಹೆಚ್ಚು ನೀರು ಸಂಗ್ರಹವಾಗದಂತೆ ತಡೆಯುವ ನಿಟ್ಟಿನಲ್ಲಿ ಮಳೆ ನೀರನ್ನು ಹೊರಹಾಕಲು ಮೋಟಾರ್ ಪಂಪ್ಗಳ ವ್ಯವಸ್ಥೆ ಮಾಡಿರುವುದಾಗಿ ಪಾಲಿಕೆ ತಿಳಿಸಿದೆ.
ಚರಂಡಿಗಳು ಬ್ಲಾಕ್ ಆಗುವುದನ್ನು ತಪ್ಪಿಸಲು ಪ್ಲಾಸ್ಟಿಕ್ ಮತ್ತು ಇತರೆ ಕಸವನ್ನು ತೆಗೆದುಹಾಕಲಾಗಿದ್ದು, ಈವರೆಗೆ ಚೆನ್ನೈನಿಂದ ಒಟ್ಟು 5,700 ಟನ್ ಕಸ ತೆಗೆಯಲಾಗಿದೆ ಎಂದು ಜಿಸಿಸಿ ತಿಳಿಸಿದೆ.
ಜಲಾವೃತವಾದರೆ ನೆರವಿಗಾಗಿ ಫಿಶಿಂಗ್ ಬೋಟ್ ಬಳಕೆಗೆ ಸಂಬಂಧಿಸಿದಂತೆ ಮೀನುಗಾರಿಕೆ ಇಲಾಖೆ ಜೊತೆಯೂ ಸಂಪರ್ಕದಲ್ಲಿರುವುದಾಗಿ ಪಾಲಿಕೆ ತಿಳಿಸಿದೆ. ಯಾವುದೇ ಸಂಭವನೀಯ ಪರಿಸ್ಥಿತಿ ಎದುರಿಸಲು 50 ಬೋಟ್ಗಳು ಸಜ್ಜಾಗಿ ನಿಂತಿವೆ ಎಂದು ಅದು ತಿಳಿಸಿದೆ.
ಕಳೆದ ವಾರ ಮಳೆಯಿಂದ ಚೆನ್ನೈನ ಹಲವು ಭಾಗಗಳು ಜಲಾವೃತಗೊಂಡಿದ್ದವು.
ಭಾರಿ ಮಳೆಯ ಹಿನ್ನೆಲೆಯಲ್ಲಿ ಪುದುಚೇರಿಯ ಶಾಲಾ–ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ.
ನವೆಂಬರ್ 21ರವರೆಗೆ ಚೆನ್ನೈ ಮತ್ತು ಉತ್ತರ ತಮಿಳುನಾಡಿನ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬೀಳಲಿದೆ ಎಂದು ಹವಾಮಾನ ಇಲಖೆ ತಿಳಿಸಿದೆ.
ಈ ಮಧ್ಯೆ, ಮುಖ್ಯ ಕಾರ್ಯದರ್ಶಿ ವಿ. ಇರಾನಿ ಅಂಬು, ಡಿಜಿಪಿ ಸಿ. ಶೈಲೇಂದ್ರ ಬಾಬು ಅವರ ಜೊತೆ ಸಭೆ ನಡೆಸಿದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಅಧಿಕ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಪರಿಸ್ಥಿತಿ ಎದುರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.