ADVERTISEMENT

‘ಉತ್ತರ‘ದಲ್ಲಿ ಮಳೆ ಅಬ್ಬರ: ಲಕ್ಷಾಂತರ ಜನರಿಗೆ ಸಂಕಷ್ಟ; 80 ಸಾವು

​ಪ್ರಜಾವಾಣಿ ವಾರ್ತೆ
Published 23 ಮೇ 2022, 7:07 IST
Last Updated 23 ಮೇ 2022, 7:07 IST
ಪ್ರವಾಹ ಸ್ಥಿತಿ
ಪ್ರವಾಹ ಸ್ಥಿತಿ   

ಗುವಾಹಟಿ/ಪಟ್ನಾ/ದೆಹಲಿ (ಪಿಟಿಐ): ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಅಸ್ಸಾಂ ಹಾಗೂ ಈಶಾಶ್ಯ ರಾಜ್ಯಗಳು ಮತ್ತು ಬಿಹಾರ ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ. ಇಲ್ಲಿಯವರೆಗೂ ‘ಉತ್ತರ‘ದಲ್ಲಿ ಮಳೆಯಿಂದ 80ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

ದೆಹಲಿಯಲ್ಲಿ ಭಾನುವಾರ ರಾತ್ರಿಯಿಂದ ಭಾರಿ ಮಳೆಯಾಗುತ್ತಿದ್ದು ಹಲವೆಡೆ ಸಂಚಾರಕ್ಕೆ ತೊಡಕಾಗಿದೆ. ವಿಮಾನ ಸಂಚಾರದಲ್ಲೂ ವ್ಯತ್ಯಯವಾಗಿದೆ. ಪ್ರತಿಕೂಲ ಹವಾಮಾನದ ಕಾರಣ ವಿಮಾನ ನಿಲ್ದಾಣ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಇಲ್ಲಿಯವರೆಗೂ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಗಾಜಿಯಾಬಾದ್, ಹಿಂಡಾನ್ ವಾಯುನೆಲೆ, ನೋಯ್ಡಾ, ಗ್ರೇಟರ್ ನೋಯ್ಡಾ, ಗುರುಗ್ರಾಮ ಸೇರಿದಂತೆ ಹಲವೆಡೆ ಗುಡುಗು ಸಹಿತ ಭಾರಿ ಮಳೆ ಮುಂದುವರಿಯಲಿದೆ ಎಂದು ಸೋಮವಾರ ಮುಂಜಾನೆ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ADVERTISEMENT

ಕಳೆದ ಮೂರು ದಿನಗಳಿಂದ ಈಶಾನ್ಯ ರಾಜ್ಯಗಳು,ಅಸ್ಸಾಂ ಹಾಗೂ ಬಿಹಾರ ರಾಜ್ಯದಲ್ಲಿಭೀಕರ ಚಂಡಮಾರುತ, ಮಳೆ ಮುಂದುವರೆದಿದ್ದು ಅಪಾರ ಪ್ರಮಾಣದ ನಷ್ಟ ಸಂವಿಸಿದೆ. ಮಳೆಯಿಂದಾಗಿ ಈ ಎರಡು ರಾಜ್ಯಗಳಲ್ಲಿ 68 ಜನರು ಮೃತಪಟ್ಟಿದ್ದಾರೆ. ಇನ್ನು ತ್ರಿಪುರ, ಮಣಿಪುರ, ವಿಜೋರಾಂ ಹಾಗೂ ಕೋಲ್ಕತ್ತಾದಲ್ಲಿ 12 ಜನರು ಮಳೆಗೆ ಬಲಿಯಾಗಿದ್ದಾರೆ. ಸುಮಾರು 10 ಲಕ್ಷ ಜನ ತೊಂದರೆಗೆ ಒಳಗಾಗಿದ್ದಾರೆ.

ಈ ರಾಜ್ಯಗಳಲ್ಲಿವಿಪತ್ತು ನಿರ್ವಹಣಾ ಪ್ರಾಧಿಕಾರದ ಸಿಬ್ಬಂದಿ ಹಾನಿಗೊಳಗಾಗಿರುವ ಪ್ರದೇಶಗಳಲ್ಲಿನ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡುತ್ತಿದ್ದಾರೆ. ಅಸ್ಸಾಂನಲ್ಲಿ ಕೇಂದ್ರವಿಪತ್ತು ನಿರ್ವಹಣಾ ಸಿಬ್ಬಂದಿಗಳು ಪ್ರವಾಹದಲ್ಲಿ ಸಿಲುಕಿರುವ ಜನರನ್ನು ರಕ್ಷಣೆ ಮಾಡಿದ್ದಾರೆ.

ಅಸ್ಸಾಂನಲ್ಲಿ 248, ಬಿಹಾರದಲ್ಲಿ 289,ತ್ರಿಪುರ, ಮಣಿಪುರ, ವಿಜೋರಾಂನಲ್ಲಿ 78 ಪರಿಹಾರ ಶಿಬಿರಗಳನ್ನು ನಡೆಸಲಾಗುತ್ತಿದ್ದು, ಅಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ 3 ಲಕ್ಷಕ್ಕೂ ಹೆಚ್ಚು ಜನರು ಆಶ್ರಯ ಪಡೆದಿದ್ದಾರೆ ಎಂದುಕೇಂದ್ರ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಭಾಗಗಳಲ್ಲಿ ಇನ್ನು ಎರಡು ಮೂರು ದಿನ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.