ADVERTISEMENT

ಕರ್ನಾಟಕದಲ್ಲಿ ತಗ್ಗಲಿದೆ ಮಳೆ, ದೇಶದ ಪಶ್ಚಿಮ ಕರಾವಳಿಯಲ್ಲಿ ಹೆಚ್ಚಳ: ಐಎಂಡಿ

ಪಿಟಿಐ
Published 23 ಜುಲೈ 2021, 12:03 IST
Last Updated 23 ಜುಲೈ 2021, 12:03 IST
   

ನವದೆಹಲಿ: ಪಶ್ಚಿಮ ಮತ್ತು ದಕ್ಷಿಣ ಭಾರತದ ಹಲವು ಭಾಗಗಳಲ್ಲಿ ಈಗಾಗಲೇ ಭಾರಿ ಮಳೆ ಸುರಿಯುತ್ತಿದೆ. ಈ ಮಧ್ಯೆಯೇ, ಮುಂದಿನ ಎರಡು ದಿನಗಳಲ್ಲಿ ಕೊಂಕಣ, ಗೋವಾ ಮತ್ತು ಮಧ್ಯ ಮಹಾರಾಷ್ಟ್ರದಲ್ಲಿ ಭಾರಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಶುಕ್ರವಾರ ತಿಳಿಸಿದೆ.

ಈ ಮಧ್ಯೆ, ಇಂದಿನಿಂದ ಕರ್ನಾಟಕದ ದಕ್ಷಿಣ ಮತ್ತು ಕರಾವಳಿ ಭಾಗದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಜುಲೈ 23 ರವರೆಗೆ ಗುಜರಾತ್‌ನಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಜುಲೈ 24 ರಿಂದ ಇದರ ತೀವ್ರತೆ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಅದು ಹೇಳಿದೆ.

ADVERTISEMENT

‘ಮುಂದಿನ 2–3 ದಿನಗಳಲ್ಲಿ ಪಶ್ಚಿಮ ಕರಾವಳಿಯಲ್ಲಿ ಮಳೆಯ ತೀವ್ರತೆ ಮತ್ತಷ್ಟು ಹೆಚ್ಚಾಗಬಹುದು. ಆ ಬಳಿಕ, ಮಳೆ ಪ್ರಮಾಣ ಕಡಿಮೆಯಾಗಬಹುದು.’ಎಂದು ಹವಾಮಾನ ಇಲಾಖೆ ತಿಳಿಸಿದೆ.

‘ಜುಲೈ 23-24ರ ಅವಧಿಯಲ್ಲಿ ಮಧ್ಯ ಮಹಾರಾಷ್ಟ್ರದ ಘಾಟ್ ಪ್ರದೇಶಗಳು, ಕೊಂಕಣ, ಗೋವಾದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಭಾಗಗಳಲ್ಲಿ ಇಂದಿನಿಂದ ಮಳೆ ಕಡಿಮೆಯಾಗಲಿದೆ.’ ಎಂದು ಅದು ಹೇಳಿದೆ.

ಮಹಾರಾಷ್ಟ್ರದ ಕೊಂಕಣ ಪ್ರದೇಶವು ಪ್ರವಾಹಕ್ಕೆ ಸಾಕ್ಷಿಯಾಗಿದೆ. ರಾಯಗಡದಲ್ಲಿ ಗುರುವಾರ ಸಂಭವಿಸಿದ ಭೂಕುಸಿತದಲ್ಲಿ ಮೂವತ್ತು ಜನರು ಸಾವನ್ನಪ್ಪಿದ್ದಾರೆ. ಪೂರ್ವ ಮುಂಬೈನ ಗೋವಂಡಿಯ ಶಿವಾಜಿ ನಗರ ಪ್ರದೇಶದಲ್ಲಿ ಶುಕ್ರವಾರ ಮುಂಜಾನೆ ಒಂದೇ ಅಂತಸ್ತಿನ ಮನೆ ಕುಸಿದು ಕನಿಷ್ಠ ಇಬ್ಬರು ಮೃತಪಟ್ಟಿದ್ದಾರೆ ಮತ್ತು ಎಂಟು ಮಂದಿ ಗಾಯಗೊಂಡಿದ್ದಾರೆ.

ನೆರೆಯ ಗೋವಾದಲ್ಲಿ, ಉತ್ತರದ ಸತ್ತಾರಿ ಮತ್ತು ಬಿಚೋಲಿಮ್ ತಹಸಿಲ್‌ಗಳು ಮತ್ತು ದಕ್ಷಿಣದಲ್ಲಿ ಧರ್ಬಂಡೋರಾ ಸೇರಿದಂತೆ ಹಲವಾರು ಭಾಗಗಳು ಪ್ರವಾಹದಿಂದ ತತ್ತರಿಸುತ್ತಿವೆ. ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾದ ನಂತರ ಕೆಲವು ನದಿಗಳ ನೀರಿನ ಮಟ್ಟ ಏರಿರುವುದರಿಂದ ಹಲವು ಮನೆಗಳು ಜಲಾವೃತಗೊಂಡಿವೆ.

ಜುಲೈ 23 ಮತ್ತು ಜುಲೈ 24 ರಂದು ಪಶ್ಚಿಮ ಮಧ್ಯಪ್ರದೇಶ ಮತ್ತು ಜುಲೈ 23 ರಂದು ಪೂರ್ವ ಮಧ್ಯಪ್ರದೇಶ, ತೆಲಂಗಾಣ ಮತ್ತು ಒಡಿಶಾದಲ್ಲೂ ಭಾರೀ ಮಳೆ ಸುರಿಯುತ್ತದೆ ಎಂದು ಐಎಂಡಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.