ಅಹಮದಾಬಾದ್: ದಕ್ಷಿಣ ಗುಜರಾತ್ನ ಹಲವೆಡೆ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ಕೆಲವು ನದಿಗಳ ನೀರಿನ ಮಟ್ಟ ಏರಿಕೆಯಾಗುತ್ತಿದ್ದು ವಿವಿಧ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ಆದ್ದರಿಂದ ರಾಜ್ಯದ ನವಸಾರಿ ಮತ್ತು ವಲ್ಸಾದ್ ಜಿಲ್ಲೆಗಳ 700ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಒರ್ಸಾಂಗ್ ನದಿ ಮಟ್ಟದಲ್ಲಿ ಏರಿಕೆಯಾದ ನಂತರ ವಲ್ಸಾದ್ ಹಾಗೂ ನವಸಾರಿ ಜಿಲ್ಲೆಗಳ ಕೆಲವು ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ.ಕಾವೇರಿ ಮತ್ತು ಅಂಬಿಕಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ನವಸಾರಿ ಜಿಲ್ಲೆಯಲ್ಲೂ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ.
‘ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಹಾಯದಿಂದ (ಎನ್ಡಿಆರ್ಎಫ್) ಇದುವರೆಗೆ ನವಸಾರಿ ಜಿಲ್ಲೆಯ ತಗ್ಗು ಪ್ರದೇಶಗಳಿಂದ 300ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ’ ಎಂದು ನವಸಾರಿ ಜಿಲ್ಲೆಯ ಜಿಲ್ಲಾಧಿಕಾರಿ ಅಮಿತ್ ಪ್ರಕಾಶ್ ಯಾದವ್ ತಿಳಿಸಿದರು.
‘ಛೋಟಾ ಉದೇಪುರ್ ಮತ್ತು ನರ್ಮದಾ ಜಿಲ್ಲೆಗಳಲ್ಲಿ ಕೂಡ ಭಾರಿ ಮಳೆಯಾಗಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ತಗ್ಗು ಪ್ರದೇಶಗಳು ಜಲಾವೃತವಾಗಿವೆ’ ಎಂದು ಅವರು ಹೇಳಿದರು.
ದಕ್ಷಿಣ ಗುಜರಾತ್ನ ಡ್ಯಾಂಗ್, ನವಸಾರಿ, ವಲ್ಸಾದ್ ಹಾಗೂ ಸೌರಾಷ್ಟ್ರದ ಪ್ರದೇಶಗಳಲ್ಲಿಮುಂದಿನ ಐದು ದಿನಗಳಲ್ಲಿ ಪ್ರತ್ಯೇಕವಾಗಿ ವಿಪರೀತ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಭಾನುವಾರ ಮುನ್ಸೂಚನೆ ನೀಡಿದೆ.
ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (ಎಸ್ಇಒಸಿ) ಹಂಚಿಕೊಂಡಿರುವ ಅಂಕಿ ಅಂಶಗಳ ಪ್ರಕಾರ, ಭಾನುವಾರ ಬೆಳಿಗ್ಗೆ 6ರ ವರೆಗೆ, 24 ಗಂಟೆಗಳ ಅವಧಿಯಲ್ಲಿ ವಲ್ಸಾದ್ ಜಿಲ್ಲೆಯ ಧರಮ್ಪುರ ತಾಲೂಕು ಮತ್ತು ನವಸಾರಿಯ ವನ್ಸಡಾ ದಲ್ಲಿ ಕ್ರಮವಾಗಿ 216 ಮತ್ತು 213 ಮಿ.ಮೀ ಮಳೆಯಾಗಿದೆ.ನವಸಾರಿಯ ಚಿಖ್ಲಿ ಮತ್ತು ಖೇರ್ಗಾಂ ತಾಲ್ಲೂಕುಗಳಲ್ಲಿ ಕ್ರಮವಾಗಿ 197 ಮಿ.ಮೀ ಮತ್ತು 194 ಮಿ.ಮೀ ಮಳೆಯಾಗಿದೆ.ಅದೇ ಅವಧಿಯಲ್ಲಿ ವಲ್ಸಾದ್ನ ಕಪ್ರಡಾದಲ್ಲಿ 194 ಮಿ.ಮೀ ಮಳೆ ದಾಖಲಾಗಿದೆ ಎಂದು ಎಸ್ಒಇಸಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.