
ಫಡಣವೀಸ್ ಅವರು ಭಾನುವಾರ ಹೆಡ್ಗೇವಾರ್ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು
–ಪಿಟಿಐ ಚಿತ್ರ
ನಾಗಪುರ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಮತ್ತು ಆಡಳಿತಾರೂಢ ಬಿಜೆಪಿ ಹಾಗೂ ಶಿವಸೇನಾದ ಶಾಸಕರು ಭಾನುವಾರ ಇಲ್ಲಿ ಆರ್ಎಸ್ಎಸ್ ಸ್ಥಾಪಕ ಕೇಶವ ಬಲಿರಾಮ ಹೆಡ್ಗೇವಾರ್ ಅವರ ಸ್ಮಾರಕಕ್ಕೆ ಭೇಟಿ ನೀಡಿದರು.
ಆದರೆ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಎನ್ಸಿಪಿ ನಾಯಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ. ಭೇಟಿಯ ಸಂದರ್ಭದಲ್ಲಿ ಏಕನಾಥ ಶಿಂದೆ, 100 ವರ್ಷಗಳನ್ನು ಪೂರೈಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಅಭಿನಂದಿಸಿದರು.
ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನ ನಾಗಪುರದಲ್ಲಿ ಭಾನುವಾರದವರೆಗೆ ನಡೆಯಿತು. ಪ್ರತಿ ವರ್ಷ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಹೆಡ್ಗೇವಾರ್ ಮತ್ತು ಗೋಲ್ವಲ್ಕರ್ ಅವರ ಸ್ಮಾರಕಕ್ಕೆ ಭೇಟಿ ನೀಡುವರು.
‘ಇಲ್ಲಿಗೆ ಭೇಟಿ ನೀಡಿದಾಗ ಮನಸ್ಸು ಪುಳಕಗೊಳ್ಳುತ್ತದೆ. ದೇಶಭಕ್ತಿ ಮತ್ತು ರಾಷ್ಟ್ರ ಸೇವೆಗಾಗಿ ಹೆಚ್ಚಿನ ಶಕ್ತಿ ಹಾಗೂ ಸ್ಫೂರ್ತಿಯನ್ನು ಪಡೆಯುತ್ತೇವೆ. ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನಿಜವಾದ ದೇಶಭಕ್ತ. ಅವರದ್ದು ದೊಡ್ಡ ವ್ಯಕ್ತಿತ್ವ. ಅವರು ಯಾವಾಗಲೂ ಸಂಘಚಾಲಕ್ ಆಗಿ ದೇಶವನ್ನು ಮುನ್ನಡೆಸುತ್ತಾರೆ. ನಾವು ಸಾಮಾನ್ಯ ಕಾರ್ಯಕರ್ತರಾಗಿ ಸಮಾಜಕ್ಕೆ ಸೇವೆ ಸಲ್ಲಿಸಲು ಅವರಿಂದ ಸ್ಫೂರ್ತಿ ಪಡೆಯುತ್ತೇವೆ’ ಎಂದು ಶಿಂದೆ ಸುದ್ದಿಗಾರರಲ್ಲಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.