ADVERTISEMENT

ಹೊಲಕ್ಕಿಳಿದು ಬೆಳೆ ಕಟಾವ್ ಮಾಡುವ ಮೂಲಕ ಪ್ರಚಾರ ಆರಂಭಿಸಿದ ಹೇಮಾ ಮಾಲಿನಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 11:38 IST
Last Updated 1 ಏಪ್ರಿಲ್ 2019, 11:38 IST
   

ಮಥುರಾ: ಮಥುರಾದಲ್ಲಿ ಹೊಲಕ್ಕಿಳಿದು ಬೆಲೆ ಕಟಾವ್ ಮಾಡುವ ಮೂಲಕ ಬಿಜೆಪಿ ಸಂಸದೆ ಹೇಮಾ ಮಾಲಿನಿ ಭಾನುವಾರ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.

ಮಥುರಾದಲ್ಲಿ ಎರಡನೇ ಬಾರಿ ಚುನಾವಣೆ ಸ್ಪರ್ಧಿಸುತ್ತಿರುವ ಹೇಮಾ ಮಾಲಿನಿ, ಕಳೆದ ಬಾರಿ 3,30,000 ಮತಗಳಿಂದ ಗೆಲುವು ಸಾಧಿಸಿದ್ದರು.

ಬಂಗಾರ ಬಣ್ಣದ ಸೀರೆಯುಟ್ಟು ಮ್ಯಾಚಿಂಗ್ ಆಭರಣ ತೊಟ್ಟು ಹೊಲಕ್ಕಿಳಿದ ಹೇಮಾ ಮಾಲಿನಿ ಅಲ್ಲಿನ ಕೆಲಸದವರ ಮಾತುಗಳನ್ನು ಆಲಿಸಿ ಮತಯಾಚಿಸಿದ್ದಾರೆ.

ADVERTISEMENT

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಲ್ಲಿನ ಜನರು ನನ್ನನ್ನು ಖುಷಿಯಿಂದಲೇ ಸ್ವಾಗತಿಸಿದ್ದಾರೆ.ನಾನು ಮಥುರಾದ ಜನರಿಗಾಗಿ ಹಲವಾರು ಕೆಲಸ ಕಾರ್ಯಗಳನ್ನು ಮಾಡಿರುವುದರಿಂದ ಅವರು ನನ್ನನ್ನು ಖುಷಿಯಿಂದ ಬರಮಾಡಿಕೊಂಡಿದ್ದಾರೆ. ನಾನು ಇಲ್ಲಿ ಮಾಡಿದ ಕೆಲಸ ಕಾರ್ಯಗಳ ಬಗ್ಗೆ ಹೆಮ್ಮೆ ಇದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯವನ್ನು ಮಾಡುವುದು ನನ್ನ ಗುರಿ. ಈ ಹಿಂದೆ ಯಾರೊಬ್ಬರು ಇಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿರಲಿಲ್ಲ ಎಂದಿದ್ದಾರೆ.

ಗೋವರ್ಧನ್ ಕ್ಷೇತ್ರದಲ್ಲಿ ನಾನು ಪ್ರಚಾರ ಕಾರ್ಯ ಆರಂಭಿಸಿದ್ದೇನೆ. ಹೊಲದಲ್ಲಿ ಕೆಲಸ ಮಾಡುವ ಮಹಿಳೆಯರೊಂದಿಗೆ ಸಂವಾದ ನಡೆಸಿದೆ ಎಂದು ಹೇಮಾ ಮಾಲಿನಿ ಟ್ವೀಟ್ ಮಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಮಹಾಮೈತ್ರಿಯ ನಾಯಕರೊಬ್ಬರು ಹೇಮಾ ಅವರನ್ನು ಹೊರಗಿನವರು ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಹೇಮಾ, ಹೌದು ನನಗೆ ಮುಂಬೈನಲ್ಲಿ ಮನೆಯಿದೆ. ಅದರಿಂದ ಏನು ಸಮಸ್ಯೆ?ನನಗೆ ಇಲ್ಲಿಯೂ ಮನೆ ಇದೆ. ನಾನು ಬೃಂದಾವನವಾಸಿ ಎಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ನಾನು ಈ ನಗರದೊಂದಿಗೆ ಒಡನಾಟ ಹೊಂದಿದ್ದೇನೆ.ಇಲ್ಲಿ ಒಂದು ದೈವಿಕ ಸಂಬಂಧ ಇದೆ. ನಾನು ನನ್ನ ನನ್ನ ಜೀವನದುದ್ದಕ್ಕೂ ರಾಧಾ ಮತ್ತು ಮೀರಾ ಪಾತ್ರ ಮಾಡಿದ್ದೇನೆ. ನನ್ನನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದಾಗ ನಾನು ದೇವಸ್ಥಾನದಲ್ಲಿದ್ದೆ.

ನಾನು 250 ಬಾರಿ ಮಥುರಾಗೆ ಭೇಟಿ ನೀಡಿದ್ದೇನೆ. ಮುಂಬೈನಿಂದ ಇಲ್ಲಿಯವರೆಗೆ ಬರುವುದು ಸುಲಭದ ಕೆಲಸವೇನೂ ಅಲ್ಲ. ನಾನು ಕೃಷ್ಣ ಭಕ್ತೆ. ನಾನು ಭೃಜ್ ವಾಸಿ ( ಕೃಷ್ಣನ ವಾಸಸ್ಥಾನ ಭೃಜ್ ) ಎಂದು ಹೇಮಾ ಮಾಲಿನಿ ಹೇಳಿರುವುದಾಗಿ ಕಳೆದ ವಾರ ಎನ್‍ಡಿಟಿವಿ ವರದಿ ಮಾಡಿತ್ತು.

ಮಾರ್ಚ್ 25ರಂದು ಯೋಗಿ ಆದಿತ್ಯನಾಥರ ನೇತೃತ್ವದಲ್ಲಿ ನಡೆದ ಪೂಜೆ ನಂತರ ಹೇಮಾ ಮಾಲಿನಿ ನಾಮ ಪತ್ರ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.