ADVERTISEMENT

ಶಾಸಕರ ಖರೀದಿ ಆತಂಕ: ಚಂಡೀಗಢದತ್ತ ಹಿಮಾಚಲ ಪ್ರದೇಶದ ಕಾಂಗ್ರೆಸ್ ನಾಯಕರು

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2022, 10:25 IST
Last Updated 8 ಡಿಸೆಂಬರ್ 2022, 10:25 IST
   

ರಾಯಪುರ: ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಬಹುಮತ ಪಡೆಯುವುದು ಬಹುತೇಕ ಖಚಿತವಾಗಿದೆ. 68 ಕ್ಷೇತ್ರಗಳ ಪೈಕಿ 39ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಪಡೆದಿದ್ದಾರೆ. ಬಿಜೆಪಿ 27 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಈ ಮಧ್ಯೆ, ಕಾಂಗ್ರೆಸ್‌ಗೆ ಶಾಸಕರ ಖರೀದಿ ಆತಂಕ ಶುರುವಾಗಿದೆ.

ಈ ಹಿನ್ನೆಲೆಯಲ್ಲಿ ಹಿಮಾಚಲಪ್ರದೇಶದ ಚುನಾವಣಾ ವೀಕ್ಷಕರಾದ ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ ಅವರ ಜೊತೆ ಭೂಪಿಂದರ್ ಸಿಂಗ್ ಹೂಡಾ, ಹಿಮಾಚಲ ಪ್ರದೇಶದ ಎಐಸಿಸಿ ಉಸ್ತುವಾರಿ ರಾಜೀವ್ ಶುಕ್ಲಾ ಸೇರಿದಂತೆ ಹಿರಿಯ ನಾಯಕರನ್ನು ಕಾಂಗ್ರೆಸ್ ಹೈಕಮಾಂಡ್ ಚಂಡೀಗಢಕ್ಕೆ ಕಳುಹಿಸಿದೆ ಎಂದು ಎಎನ್‌ಐ ಟ್ವೀಟಿಸಿದೆ.

ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಬಿಜೆಪಿ ಯತ್ನವನ್ನು ತಡೆಯುವ ಕಾರ್ಯಾಚರಣೆ ನಡೆಯುತ್ತಿದೆ. ನಾನು ಮತ್ತು ರಾಜೀವ್ ಶುಕ್ಲಾ ಚಂಡೀಗಢಕ್ಕೆ ತೆರಳುತ್ತಿದ್ದೇವೆ. ಭೂಪಿಂದರ್ ಸಿಂಗ್ ಹೂಡಾ ಈಗಾಗಲೇ ಅಲ್ಲಿಗೆ ತೆರಳಿದ್ದಾರೆ ಎಂದು ಬಘೇಲ್ ತಿಳಿಸಿದ್ದಾರೆ.

ADVERTISEMENT

‘ನಾವು ನಮ್ಮ ನಾಯಕರನ್ನು ಚಂಡೀಗಢಕ್ಕೆ ಕರೆದೊಯ್ಯುತ್ತಿದ್ದೇವೆ. ಶಾಸಕರನ್ನು ಸೆಳೆಯುವ ಬಿಜೆಪಿಯ ಯತ್ನಕ್ಕೆ ಪಕ್ಷದ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚುತ್ತಿದ್ದೇವೆ. ಈ ಹಿಂದೆ ಹಲವು ಬಾರಿ ಬಿಜೆಪಿ ಆ ಕೆಲಸ ಮಾಡಿದೆ’ಎಂದು ಹಿಮಾಚಲಪ್ರದೇಶದ ಪಕ್ಷದ ಉಸ್ತುವಾರಿ ತಜಿಂದರ್ ಸಿಂಗ್ ಬಿಟ್ಟು ಹೇಳಿದ್ಧಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.