ಅಲಿಗಡ:ಹುತಾತ್ಮರ ದಿನವಾದ ಬುಧವಾರ (ಜನವರಿ 30) ಉತ್ತರ ಪ್ರದೇಶದಲ್ಲಿ ಮಹಾತ್ಮ ಗಾಂಧಿ ಹತ್ಯೆ ಘಟನೆಯನ್ನು ಮರುಸೃಷ್ಟಿಸಿ ಸಂಭ್ರಮಾಚರಣೆ ಮಾಡಲಾಗಿದೆ.
ಗಾಂಧಿ ಅವರ ಪ್ರತಿಕೃತಿಗೆಹಿಂದೂ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ನಕಲಿ ಬಂದೂಕಿನಿಂದ ಗುಂಡಿಕ್ಕಿದ್ದಾರೆ. ಈ ವೇಳೆ, ಪ್ರತಿಕೃತಿಯಿಂದ ಕಡು ಕೆಂಪು ಬಣ್ಣದ ರಕ್ತದ ಮಾದರಿಯ ದ್ರಾವಣ ಹೊರ ಚಿಮ್ಮುವಂತೆ ಮಾಡಿಸಂಭ್ರಮಾಚರಿಸಲಾಗಿದೆ ಎಂದುಟೈಮ್ಸ್ ನೌ ಸುದ್ದಿವಾಹಿನಿ ವಿಡಿಯೊ ಸಹಿತ ವರದಿ ಮಾಡಿದೆ.
ಮಹಾತ್ಮ ಗಾಂಧಿಯವರು ದೇಶದ ಸ್ವಾತಂತ್ರ್ಯಕ್ಕೆ ನೀಡಿದ ಕೊಡುಗೆ ಮತ್ತು ತ್ಯಾಗವನ್ನು ಸ್ಮರಿಸಿ ಅವರು ಹತ್ಯೆಯಾದ ದಿನವನ್ನು ದೇಶದೆಲ್ಲೆಡೆ ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತಿದೆ. ಆದರೆ, ದೇಶ ವಿಭಜನೆ ಮತ್ತು ಪಾಕಿಸ್ತಾನದ ಹುಟ್ಟಿಗೆ ಗಾಂಧಿಯವರೇ ಕಾರಣ ಎಂದು ಆರೋಪಿಸುವ ಹಿಂದೂ ಮಹಾಸಭಾವು ಗಾಂಧಿ ಹತ್ಯೆಯಾದ ದಿನದಂದು ಸಂಭ್ರಮಾಚರಣೆ ಮಾಡುತ್ತಿದೆ.
ಗಾಂಧಿ ಪ್ರತಿಕೃತಿಗೆ ಗುಂಡಿಕ್ಕಿದ ಬಳಿಕಪೂಜಾ ಅವರು ನಾಥೂರಾಮ್ ಗೋಡ್ಸೆ (ಗಾಂಧಿ ಹಂತಕ) ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ಗೌರವ ಸಲ್ಲಿಸಿದ್ದಾರೆ. ತಮ್ಮ ಬೆಂಬಲಿಗರಿಗೆ ಸಿಹಿ ಹಂಚಿದ್ದಾರೆ.
ಗಾಂಧಿ ಹತ್ಯೆಯಾದದಿನವಾದ ಜನವರಿ 30 ಅನ್ನು ಶೌರ್ಯ ದಿವಸ ಎಂದು ಕರೆದು ಈ ಹಿಂದೆಯೂ ಹಿಂದೂ ಮಹಾಸಭಾ ಸಂಭ್ರಮಾಚರಣೆ ನಡೆಸಿದೆ. ಆಗೆಲ್ಲ ಗೋಡ್ಸೆ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ಗೌರವ ಸಲ್ಲಿಸುವುದು ಮತ್ತು ಸಿಹಿ ಹಂಚುವುದು ನಡೆದಿತ್ತು. ಆದರೆ, ಗಾಂಧಿ ಅವರ ಪ್ರತಿಕೃತಿ ನಿರ್ಮಿಸಿ ಅದಕ್ಕೆ ಗುಂಡಿಕ್ಕಿ ಘಟನೆಯನ್ನು ಮರುಸೃಷ್ಟಿಸಿದ್ದು ಇದೇ ಮೊದಲು ಎಂದು ವರದಿ ಉಲ್ಲೇಖಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.