ADVERTISEMENT

ಭಾರತ ಇಸ್ಲಾಂ ದೇಶವಾಗೋದನ್ನ ತಡೆಯಲು ಹಿಂದೂಗಳು ಹೆಚ್ಚು ಮಕ್ಕಳಿಗೆ ಜನ್ಮ ನೀಡಿ: ಸಂತ

ಪಿಟಿಐ
Published 18 ಏಪ್ರಿಲ್ 2022, 2:17 IST
Last Updated 18 ಏಪ್ರಿಲ್ 2022, 2:17 IST
ಯತಿ ನರಸಿಂಗಾನಂದರ
ಯತಿ ನರಸಿಂಗಾನಂದರ   

ಶಿಮ್ಲಾ: ಭಾರತವು ಇಸ್ಲಾಮಿಕ್ ರಾಷ್ಟ್ರವಾಗುವುದನ್ನು ತಪ್ಪಿಸಲು ಹಿಂದೂಗಳು ಹೆಚ್ಚು ಮಕ್ಕಳಿಗೆ ಜನ್ಮ ನೀಡುವಂತೆ ವಿವಾದಗಳಿಂದ ಗುರುತಿಸಿಕೊಂಡಿರುವ ಸಂತ ಯತಿ ನರಸಿಂಗಾನಂದರ ಸಂಘಟನೆ ಭಾನುವಾರ ಕರೆನೀಡಿದೆ.

ಹರಿದ್ವಾರದ ದ್ವೇಷ ಭಾಷಣ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಸಂತ, ಈ ತಿಂಗಳ ಆರಂಭದಲ್ಲಿ ಮಥುರಾದಲ್ಲಿ ಮುಂದಿನ ದಶಕಗಳಲ್ಲಿ ದೇಶದಲ್ಲಿ 'ಹಿಂದೂಗಳು ಕಡಿಮೆ' ಆಗುವುದನ್ನು ತಡೆಯಲು ಹೆಚ್ಚಿನ ಮಕ್ಕಳಿಗೆ ಜನ್ಮ ನೀಡಬೇಕೆಂದು ಹಿಂದೂಗಳಿಗೆ ಆಗ್ರಹಿಸಿದ್ದರು.

ಹಿಂದೂಗಳು ಬಹುಸಂಖ್ಯಾತರಾಗಿರುವುದರಿಂದ ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಎಂದು ಅಖಿಲ ಭಾರತ ಸಂತ ಪರಿಷತ್ತಿನ ಹಿಮಾಚಲ ಪ್ರದೇಶದ ಉಸ್ತುವಾರಿ ಯತಿ ಸತ್ಯದೇವಾನಂದ ಸರಸ್ವತಿ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ADVERTISEMENT

ಆದರೆ, ಮುಸ್ಲಿಮರು ಯೋಜಿತ ರೀತಿಯಲ್ಲಿ ಅನೇಕ ಮಕ್ಕಳಿಗೆ ಜನ್ಮ ನೀಡುವ ಮೂಲಕ ತಮ್ಮ ಜನಸಂಖ್ಯೆಯನ್ನು ಹೆಚ್ಚಿಸುತ್ತಿದ್ದಾರೆ ಎಂದು ಅವರು ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಮುಬಾರಕ್‌ಪುರದಲ್ಲಿ ಸಂಘಟನೆಯ ಮೂರು ದಿನಗಳ 'ಧರ್ಮ ಸಂಸದ್'ನ ಮೊದಲ ದಿನದಲ್ಲಿ ಪ್ರತಿಪಾದಿಸಿದ್ದರು.

ಹೀಗಾಗಿ, ಭಾರತವು ಇಸ್ಲಾಮಿಕ್ ರಾಷ್ಟ್ರವಾಗುವುದನ್ನು ತಪ್ಪಿಸಲು ಹೆಚ್ಚಿನ ಮಕ್ಕಳಿಗೆ ಜನ್ಮ ನೀಡುವಂತೆ ನಮ್ಮ ಸಂಘಟನೆಯು ಹಿಂದೂಗಳನ್ನು ಕೇಳಿದೆ' ಎಂದು ತಿಳಿಸಿದ್ದಾರೆ.

ಯತಿ ನರಸಿಂಹಾನಂದ್, ಅನ್ನಪೂರ್ಣ ಭಾರತಿ ಮತ್ತು ದೇಶದ ಹಲವಾರು ದಾರ್ಶನಿಕರು ಮತ್ತು ಸಂತರು ಭಾಗವಹಿಸುತ್ತಿರುವ ಈ ಸಭೆಯನ್ನು ಗಮನದಲ್ಲಿಟ್ಟುಕೊಂಡು, ಹಿಮಾಚಲ ಪ್ರದೇಶ ಪೊಲೀಸರು ಸರಸ್ವತಿ ಅವರಿಗೆ ನೋಟಿಸ್‌ನಲ್ಲಿ ಯಾವುದೇ ಧರ್ಮ ಅಥವಾ ಜಾತಿ ಕುರಿತು ಪ್ರಚೋದನಕಾರಿ ಭಾಷೆಯನ್ನು ಬಳಸಬಾರದು ಎಂದು ಸೂಚಿಸಿದ್ದರು.

'ಮುಸ್ಲಿಮರು ಬಹುಸಂಖ್ಯಾತರಾದಾಗ ಭಾರತವು ಕೂಡ ನೆರೆಯ ಪಾಕಿಸ್ತಾನದಂತೆ ಇಸ್ಲಾಮಿಕ್ ದೇಶವಾಗುತ್ತದೆ. ಹೀಗಾಗಿಯೇ ಭಾರತವು ಇಸ್ಲಾಮಿಕ್ ರಾಷ್ಟ್ರವಾಗುವುದನ್ನು ತಪ್ಪಿಸಲು ಹಿಂದೂಗಳು ಹೆಚ್ಚಿನ ಮಕ್ಕಳಿಗೆ ಜನ್ಮ ನೀಡಬೇಕೆಂದು ನಮ್ಮ ಸಂಘಟನೆ ಕೇಳಿಕೊಂಡಿದೆ. ನಾಗರಿಕರು ಕೇವಲ ಎರಡು ಮಕ್ಕಳಿಗೆ ಮಾತ್ರ ಜನ್ಮ ನೀಡಬೇಕೆಂದು ಹೇಳುವ ಕಾನೂನು ನಮ್ಮ ದೇಶದಲ್ಲಿಲ್ಲ' ಎಂದಿದ್ದಾರೆ.

ಕಳೆದ ವರ್ಷ ಡಿಸೆಂಬರ್ 17-19ರವರೆಗೆ ಧರ್ಮ ಸಂಸದ್ ಕಾರ್ಯಕ್ರಮವನ್ನು ಹರಿದ್ವಾರದಲ್ಲಿ ಆಯೋಜಿಸಿ ಮುಸ್ಲಿಮರ ವಿರುದ್ಧ ಪ್ರಚೋದನಾಕಾರಿ ಭಾಷಣ ಮಾಡಿದ್ದಕ್ಕಾಗಿ ಯತಿ ನರಸಿಂಗಾನಂದರನ್ನು ಬಂಧಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.