ನವದೆಹಲಿ: ಅಸ್ಸಾಂನ ಬಿಜೆಪಿ ಮುಖಂಡ ಹಿಮಂತ ಬಿಸ್ವ ಶರ್ಮಾ ಅವರ ಚುನಾವಣಾ ಪ್ರಚಾರಕ್ಕೆ ವಿಧಿಸಿದ್ದ ನಿರ್ಬಂಧದ ಅವಧಿ ಕಡಿತಗೊಳಿಸಿರುವುದಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಇದು ಸಂಸದೀಯ ಪ್ರಜಾಪ್ರಭುತ್ವದ ಕಪ್ಪು ದಿನವಾಗಿದ್ದು ಇತಿಹಾಸವು ಎಂದಿಗೂ ಚುನಾವಣಾ ಆಯೋಗವನ್ನು ಕ್ಷಮಿಸದು ಎಂದು ಕಾಂಗ್ರೆಸ್ ಹೇಳಿದೆ.
ತನ್ನದೇ ಆದೇಶವನ್ನು ಕಾಯ್ದುಕೊಳ್ಳಲು ಚುನಾವಣಾ ಆಯೋಗಕ್ಕೆ ಸಾಧ್ಯವಾಗಲಿಲ್ಲ ಎಂಬುದು ಖೇದಕರ. ಆಯೋಗವು ಮೋದಿ ಸರ್ಕಾರದ ಒತ್ತಡಕ್ಕೆ ಸಿಲುಕಿದೆ. ಇದೇ ಕಾರಣಕ್ಕೆ ಹಿಮಂತ ಬಿಸ್ವ ಶರ್ಮಾ ಅವರ ಮೇಲೆ ವಿಧಿಸಿದ್ದ 48 ಗಂಟೆಗಳ ಪ್ರಚಾರ ನಿರ್ಬಂಧವನ್ನು 24 ಗಂಟೆಗಳಿಗೆ ಕಡಿತಗೊಳಿಸಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ ಹೇಳಿದ್ದಾರೆ.
ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಬಿಸ್ವ ಅವರ ಚುನಾವಣಾ ಪ್ರಚಾರಕ್ಕೆ 48 ಗಂಟೆಗಳ ನಿರ್ಬಂಧ ವಿಧಿಸಿ ಚುನಾವಣಾ ಆಯೋಗವು ಶುಕ್ರವಾರ ಆದೇಶ ಹೊರಡಿಸಿತ್ತು. ಆದರೆ ಇಂದು (ಶನಿವಾರ) ನಿರ್ಬಂಧದ ಅವಧಿಯನ್ನು ಕಡಿತಗೊಳಿಸಿದೆ.
ಅಸ್ಸಾಂ ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ ಹಿಮಂತ ಬಿಸ್ವ ಶರ್ಮಾ ಅವರು ಬೋಡೊ ಪೀಪಲ್ಸ್ ಫ್ರಂಟ್ನ (ಬಿಪಿಎಫ್) ಮುಖ್ಯಸ್ಥ ಹಾಗರಾಮ್ ಮೊಹಿಲಾರಿ ಅವರಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆ ಹಿನ್ನೆಲೆಯಲ್ಲಿ ಬಿಪಿಎಫ್ನ ಮಿತ್ರ ಪಕ್ಷವಾಗಿರುವ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಬಳಿಕ ಆಯೋಗವು ಪ್ರಚಾರಕ್ಕೆ ನಿರ್ಬಂಧ ವಿಧಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.