ADVERTISEMENT

ಟ್ರಾಲಿ ಚೀಲದಲ್ಲಿ ಮಹಿಳೆ ಶವ ಪತ್ತೆ: ಮರ್ಯಾದೆಗೇಡು ಹತ್ಯೆ ಶಂಕೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2022, 15:49 IST
Last Updated 21 ನವೆಂಬರ್ 2022, 15:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಥುರಾ: ತಂದೆಯಿಂದಲೇ ಮಗಳ ಹತ್ಯೆ ನಡೆದಿರುವ ಪ್ರಕರಣ ದೆಹಲಿಯಮೋದ್‌ಬಂದ್‌ ಗ್ರಾಮದಲ್ಲಿ ಈಚೆಗೆ ನಡೆದಿದೆ. ಮೃತದೇಹವು ಟ್ರಾಲಿ ಚೀಲದಲ್ಲಿ ಯಮುನಾ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಪತ್ತೆಯಾಗಿದೆ. ಇದು ಮರ್ಯಾದೆಗೇಡು ಹತ್ಯೆ ಎಂದು ಪೊಲೀಸರು ಶಂಕಿಸಿದ್ದಾರೆ.

ಸಂತ್ರಸ್ತೆಯನ್ನು ದೆಹಲಿ ನಿವಾಸಿ ಆಯುಷಿ ಯಾದವ್‌(21) ಎಂದು ಗುರುತಿಸಲಾಗಿದೆ. ಆಕೆ ಬಿಸಿಎ ವ್ಯಾಸಂಗ ಮಾಡುತ್ತಿದ್ದಳು. ಮಹಿಳೆಯ ತಂದೆ ನಿತೇಶ್‌ ಯಾದವ್‌ನನ್ನು ಪೊಲೀಸ್‌ ವಶಕ್ಕೆ ತೆಗೆದುಕೊಳ್ಳಲಾಗಿದೆ. ಕೊಲೆಗೆ ಬಳಸಿದ್ದ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಕುಟುಂಬ ಸದಸ್ಯರಿಗೆ ತಿಳಿಸದೇ ಮನೆಯಿಂದ ಹೊರಹೋಗಿದ್ದ ಆಯುಷಿ ಕೆಲ ದಿನಗಳ ಕಾಲ ಮನೆಗೆ ಬಂದಿರಲಿಲ್ಲ. ಇದು ಆಕೆಯ ತಂದೆಯ ಸಿಟ್ಟಿಗೆ ಕಾರಣವಾಗಿತ್ತು. ನವೆಂಬರ್‌ 17ರಂದು ಆಕೆ ಮನೆಗೆ ಬಂದವೇಳೆ ಆಕೆಯನ್ನು ತಂದೆಯೇ ಗುಂಡಿಕ್ಕೆ ಹತ್ಯೆ ಮಾಡಿದ. ಅದೇ ರಾತ್ರಿ ಆಕೆಯ ಮೃತದೇಹವನ್ನು ಟ್ರಾಲಿ ಚೀಲದಲ್ಲಿ ತುಂಬಿ ಯಮುನಾ ಎಕ್ಸ್‌ಪ್ರೆಸ್‌ ಹೆದ್ದಾರಿಯ ರಾಯ ಅಡ್ಡದಾರಿಯಲ್ಲಿ ಎಸೆದು ಬಂದ’ ಎಂದು ಆಕೆಯ ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಟ್ರಾಲಿ ಚೀಲದಲ್ಲಿ ಮೃತದೇಹ ಪತ್ತೆಯಾದ ಬಳಿಕ ಪೊಲೀಸರು ಆಕೆಯ ಗುರುತು ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದ್ದರು. ಭಾನುವಾರ ಬಂದ ಅಪರಿಚಿತ ವ್ಯಕ್ತಿಯ ದೂರವಾಣಿ ಕರೆಯ ಆಧಾರದ ಮೇಲೆ ಆಕೆಯ ಗುರುತು ಪತ್ತೆ ಮಾಡಲಾಯಿತು. ಬಳಿಕ ಆಕೆಯ ತಾಯಿ ಮತ್ತು ಸಹೋದರ ಆಕೆಯನ್ನು ಗುರುತಿಸಿದರು ಎಂದು ಅವರು ತಿಳಿಸಿದ್ದಾರೆ.

ಆಯುಷಿ ಕುಟುಂಬವು ಮೂಲತಃ ಉತ್ತರ ಪ್ರದೇಶದ ಗೋರಖಪುರದವರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.