ಬಂಧನ
(ಸಾಂದರ್ಭಿಕ ಚಿತ್ರ)
ಹೈದರಾಬಾದ್: ಸೂರ್ಯಪೇಟ್ನಲ್ಲಿ ನಾಲ್ಕು ದಿನಗಳ ಹಿಂದೆ ನಡೆದ ದಲಿತ ವ್ಯಕ್ತಿಯ ಮರ್ಯಾದೆಗೇಡು ಹತ್ಯೆ ಪ್ರಕರಣ ಸಂಬಂಧ ಪೊಲೀಸರು ಗುರುವಾರ ಆರು ಮಂದಿಯನ್ನು ಬಂಧಿಸಿದ್ದಾರೆ.
ಕೃಷ್ಣ (32) ಹತ್ಯೆಯಾದ ಯುವಕ. ಇವರ ಪತ್ನಿ ಭಾರ್ಗವಿ ಅವರ ಕುಟುಂಬಸ್ಥರೇ ಇವರನ್ನು ಕೊಲೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರ್ಗವಿ ಅವರ ಅಜ್ಜಿ ಬುಚ್ಚಮ್ಮ, ತಂದೆ ಕೊಟ್ಲಾ ಸೈದುಲು, ಸಹೋದರರಾದ ಕೊಟ್ಲಾ ನವೀನ್ ಮತ್ತು ಕೊಟ್ಲಾ ವಂಶಿ ಹಾಗೂ ಅವರ ಸ್ನೇಹಿತರಾದ ಬೈರು ಮಹೇಶ್, ನವ್ವುಲಾ ಸಾಯಿ ಚರಣ್ ಬಂಧಿತರು.
ದಲಿತ ಸಮುದಾಯದ ಕೃಷ್ಣ ಮತ್ತು ಹಿಂದುಳಿದ ಸಮುದಾಯದ ಭಾರ್ಗವಿ ಅವರು ಕುಟುಂಬಗಳ ವಿರೋಧದ ಮಧ್ಯೆ ಆರು ತಿಂಗಳ ಹಿಂದೆ ಅಂತರ್ಜಾತಿ ವಿವಾಹವಾಗಿದ್ದರು.
ಭಾರ್ಗವಿ ಅವರ ಅಜ್ಜಿ 65 ವರ್ಷದ ಬುಚ್ಚಮ್ಮ ಅವರೇ ಕೃಷ್ಣ ಅವರನ್ನು ಕೊಲೆಗೈಯಲು ಮೊಮ್ಮಕ್ಕಳನ್ನು ಪ್ರೇರೇಪಿಸಿದ್ದರು ಎಂಬುದು ಗೊತ್ತಾಗಿದೆ. ಕೃಷ್ಣ ಅವರನ್ನು ಕೊಲೆ ಮಾಡಿದ ನಂತರ ಕಾಲುವೆಯಲ್ಲಿ ಎಸೆಯುವ ಮೊದಲು ಶವವನ್ನು ಬುಚ್ಚಮ್ಮ ಅವರಿಗೆ ನವೀನ್ ಮತ್ತು ವಂಶಿ ತೋರಿಸಿದ್ದರು. ಇದಕ್ಕೂ ಮುನ್ನ ಮೂರು ಬಾರಿ ಕೊಲೆಗೆ ವಿಫಲ ಯತ್ನ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.