ADVERTISEMENT

ಸಂಬಂಧಿಕರು ಬೇಡವೆಂದರೆ ರೋಗಿಗಳನ್ನು ICUನಲ್ಲಿ ಇರಿಸಿಕೊಳ್ಳುವಂತಿಲ್ಲ: ಸಚಿವಾಲಯ

ಪಿಟಿಐ
Published 2 ಜನವರಿ 2024, 10:56 IST
Last Updated 2 ಜನವರಿ 2024, 10:56 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಸಂಬಂಧಿಕರು ವಿರೋಧಿಸಿದರೆ ಗಂಭೀರ ಅನಾರೋಗ್ಯಕ್ಕೆ ತುತ್ತಾಗಿರುವ ರೋಗಿಯನ್ನು ಆಸ್ಪತ್ರೆಗಳು ತೀವ್ರ ನಿಗಾ ಘಟಕ(ICU)ದಲ್ಲಿ ಇರಿಸಿಕೊಳ್ಳುವಂತಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇತ್ತೀಚಿಗೆ ಬಿಡುಗಡೆ ಮಾಡಿದ ಮಾರ್ಗಸೂಚಿಯಲ್ಲಿ ಹೇಳಿದೆ.

ಐಸಿಯು ದಾಖಲಾತಿ ಕುರಿತು ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಮಾರ್ಗಸೂಚಿಯಲ್ಲಿ, ‘ರೋಗಿಗೆ ಹೆಚ್ಚಿನ ಚಿಕಿತ್ಸೆ ಪ್ರಯೋಜನವಿಲ್ಲದಿದ್ದಲ್ಲಿ ಅಥವಾ ಯಾವುದೇ ಚಿಕಿತ್ಸೆಯಿಂದ ರೋಗಿಯ ಆರೋಗ್ಯದಲ್ಲಿ ಯಾವುದೇ ಚೇತರಿಕೆ ತರಲು ಸಾಧ್ಯವಿಲ್ಲದ ಸಂದರ್ಭದಲ್ಲಿ ರೋಗಿಯನ್ನು ಐಸಿಯುನಲ್ಲಿಡುವುದು ನಿರರ್ಥಕ ಆಯ್ಕೆ’ ಎಂದು ಹೇಳಲಾಗಿದೆ. 24 ತಜ್ಞರ ಅಭಿಪ್ರಾಯ ಆಧರಿಸಿ ಈ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ADVERTISEMENT

‘ಆದರೆ, ಕೋವಿಡ್‌ನಂತಹ ಸಾಂಕ್ರಾಮಿಕ ರೋಗ ಅಥವಾ ವಿಪತ್ತು ಸಂದರ್ಭದಲ್ಲಿ ಸಂಪನ್ಮೂಲದ ಮಿತಿ ಇದ್ದಲ್ಲಿ ಅಂಥ ಸಂದರ್ಭದಲ್ಲಿ ರೋಗಿಯನ್ನು ಐಸಿಯುನಲ್ಲಿ ಇಡಬಹುದು. ಅಂಗಾಂಗ ವೈಫಲ್ಯ ಹಾಗೂ ಅಂಗಾಂಗ ಕಸಿ ಅಥವಾ ವೈದ್ಯಕೀಯ ಸ್ಥಿತಿ ಕ್ಷೀಣಿಸುವ ನಿರೀಕ್ಷೆ ಇದ್ದಲ್ಲಿ ಅಂಥವರನ್ನು ಐಸಿಯುನಲ್ಲಿ ಇಡಬಹುದು’ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

‘ಹೃದಯ ಸಂಬಂಧಿ ಸಮಸ್ಯೆ ಅಥವಾ ಉಸಿರಾಟ ಸಮಸ್ಯೆ ಅಥವಾ ಯಾವುದಾದರೂ ಪ್ರಮುಖ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ ಅಂಥವರು ಐಸಿಯುನಲ್ಲಿ ಚಿಕಿತ್ಸೆ ಪಡೆಯಬಹುದು. ಆದರೆ ರೋಗಿಯ ಸಂಬಂಧಿಕರು ಐಸಿಯು ಚಿಕಿತ್ಸೆ ಬೇಡವೆಂದರೆ ಅಂಥ ರೋಗಿಗಳನ್ನು ದಾಖಲಿಸುವಂತಿಲ್ಲ. ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಇದ್ದರೆ, ಐಸಿಯು ಆರೈಕೆ ವಿರುದ್ಧದ ಸುಧಾರಿತ ನಿರ್ದೇಶನಗಳ ಪಾಲನೆಯಲ್ಲಿ ಸೂಚಿಸಿದ್ದರೆ ಐಸಿಯುನಲ್ಲಿ ದಾಖಲಿಸುವಂತಿಲ್ಲ’ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಒಂದೊಮ್ಮೆ ಯಾವುದೇ ರೋಗಿಯು ಐಸಿಯು ಹಾಸಿಗೆಯ ನಿರೀಕ್ಷೆಯಲ್ಲಿದ್ದರೆ, ಅಂಥವರ ರಕ್ತದೊತ್ತಡ, ನಾಡಿ ಮಿಡಿತ, ಉಸಿರಾಟ ಕ್ರಿಯೆ ಹಾಗೂ ಪ್ರಕ್ರಿಯೆ, ಹೃದಯದ ಆರೋಗ್ಯ, ಆಮ್ಲಜನಕ ಹೀರಿಕೊಳ್ಳುವ ಸಾಮರ್ಥ್ಯ, ಮೂತ್ರ ವಿಸರ್ಜನೆಯ ಪ್ರಮಾಣ ಮತ್ತು ನರವ್ಯೂಹದ ಸ್ಥಿತಿಗತಿಯಂತಹ ಅಂಶಗಳನ್ನು ಪರೀಕ್ಷಿಸಿಯೇ ರೋಗಿಯನ್ನು ದಾಖಲಿಸಿಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.