ಜೊರ್ಹಾತ್/ಗುವಾಹಟಿ: ಬ್ರಹ್ಮಪುತ್ರ ನದಿಯಲ್ಲಿ ಪ್ರಯಾಣಿಕ ದೋಣಿಯೊಂದು ಬುಧವಾರ ಮುಳುಗಿದ್ದು, ಸುಮಾರು ನೂರು ಜನರು ಜಲಸಮಾಧಿಯಾಗಿರಬಹುದು ಎಂದು ಶಂಕಿಸಲಾಗಿದೆ.
ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
41 ಜನರನ್ನು ರಕ್ಷಿಸಲಾಗಿದ್ದು, ಇನ್ನುಳಿದವರಿಗಾಗಿ ಶೋಧ ನಡೆದಿದೆ. ಮೃತದೇಹಗಳ ಹುಡುಕಾಟ ನಡೆದಿದೆ ಎಂದು ಜೊರ್ಹಾತ್ ಜಿಲ್ಲಾಧಿಕಾರಿ ಅಶೋಕ ಬರ್ಮನ್ ತಿಳಿಸಿದ್ದಾರೆ.
120ಕ್ಕೂ ಹೆಚ್ಚು ಪ್ರಯಾಣಿಕರಿದ್ದ ದೋಣಿಯು ನಿಮತಿ ಘಾಟ್ನಿಂದ ಮಾಜುಲಿ ದ್ವೀಪದತ್ತ ತೆರಳುತ್ತಿತ್ತು. ಸರ್ಕಾರದ ಒಡೆತನದ ಸ್ಟೀಮ್ ದೋಣಿಯು ಮಾಜುಲಿಯಿಂದ ವಾಪಸ್ಸಾಗುತ್ತಿತ್ತು. ಇವೆರಡೂ ಪರಸ್ಪರ ಡಿಕ್ಕಿಯಾಗಿದ್ದರಿಂದ, ಪ್ರಯಾಣಿಕರ ದೋಣಿ ಮುಳುಗಿದೆ.
ದೋಣಿಯಲ್ಲಿ ವಾಹನಗಳನ್ನೂ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.
ಮೃತಪಟ್ಟವರ ಸಂಖ್ಯೆ ನಿಖರವಾಗಿ ಗೊತ್ತಿಲ್ಲ ಎಂದು ಜಿಲ್ಲಾ ಆಡಳಿತದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾ, ರಕ್ಷಣಾ ಕಾರ್ಯದ ಬಗ್ಗೆ ನಿಗಾ ವಹಿಸುವಂತೆ ಮಾಜುಲಿ ಹಾಗೂ ಜೋರ್ಹಾತ್ ಜಿಲ್ಲಾ ಆಡಳಿತಕ್ಕೆ ಸೂಚಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.