ಹೈದರಾಬಾದ್: ಭಾರಿ ಮಳೆಯಿಂದಾಗಿ ಮಂಗಳವಾರ ರಾತ್ರಿ 10 ಮನೆಗಳ ಮೇಲೆ ಕಾಂಪೌಂಡ್ ಕುಸಿದ ಪರಿಣಾಮ 2 ತಿಂಗಳ ಹಸುಳೆಯೂ ಸೇರಿ ಒಟ್ಟು 9 ಮಂದಿ ಮೃತಪಟ್ಟಿದ್ದಾರೆ. ಮೃತದೇಹಗಳು ಅವಶೇಷಗಳ ಅಡಿಗೆ ಸಿಲುಕಿವೆ.
ತೆಲಂಗಾಣ ಮತ್ತು ಪಕ್ಕದ ಆಂಧ್ರ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಭಾರಿ ಮಳೆ ಸುರಿಯುತ್ತಿದೆ. ಕಳೆದ 48 ಗಂಟೆಗಳಲ್ಲಿ ತೆಲಂಗಾಣದಲ್ಲಿ ಒಟ್ಟು 12 ಮಂದಿ ಮೃತಪಟ್ಟಿದ್ದಾರೆ. ರಸ್ತೆಗಳು ಮತ್ತು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.
ಹೈದರಾಬಾದ್ ನಗರದ ಕೆಲ ಪ್ರದೇಶಗಳು ನೀರು ನಿಂತಿದ್ದು, ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ತೆಲಂಗಾಣದ ಕನಿಷ್ಠ 14 ಜಿಲ್ಲೆಗಳಲ್ಲಿ ಮಳೆ ಅನಾಹುತ ವರದಿಯಾಗಿದೆ.
ಹೈದರಾಬಾದ್ನಲ್ಲಿ ಮಂಗಳವಾರ ಮಧ್ಯರಾತ್ರಿಯ ಕಾಂಪೌಂಡ್ ಕುಸಿತದ ಬಗ್ಗೆ ಸಂಸದ ಅಸಾದುದ್ದೀನ್ ಓವೈಸಿ ಟ್ವೀಟ್ ಮಾಡಿದ್ದಾರೆ. ‘ಬಂಗ್ಲಗುಡದ ಮೊಹಮದೀಯ ಹಿಲ್ಸ್ ಸಮೀಪ ದುರಂತ ಸಂಭವಿಸಿದೆ. ನೀರಿನಲ್ಲಿ ಸಿಲುಕಿದ್ದ ಬಸ್ ಒಂದರ ಪ್ರಯಾಣಿಕರನ್ನು ಶಂಶಾಬಾದ್ಗೆ ಕಳುಹಿಸುವ ವ್ಯವಸ್ಥೆ ಮಾಡಿದೆ’ ಎಂದು ಓವೈಸಿ ಹೇಳಿದ್ದಾರೆ.
‘ಭಾರೀ ಮಳೆ ಸುರಿಯುತ್ತಿದ್ದು, ತೀವ್ರತೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಮನೆಗಳಿಂದ ಹೊರಗೆ ಬರಬೇಡಿ’ ಎಂದು ಹೈದರಾಬಾದ್ ನಿವಾಸಿಗಳಿಗೆ ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ.
ಬಂಗಾಳಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ವಾಯುಭಾರ ಕುಸಿತದಿಂದಾಗಿ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಒಡಿಶಾ ರಾಜ್ಯಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ. ಆಂಧ್ರ ಪ್ರದೇಶದ 100ಕ್ಕೂ ಹೆಚ್ಚು ಸ್ಥಳಗಳಲ್ಲಿ 11ರಿಂದ 24 ಸೆಂ.ಮೀ. ಪ್ರಮಾಣದ ಮಳೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.