ನವದೆಹಲಿ: ‘ನಾನು ಇಂದಿರಾ ಗಾಂಧಿ ಮೊಮ್ಮಗಳು. ಬಿಜೆಪಿಯ ಅಘೋಷಿತ ವಕ್ತಾರರಂತೆ ವರ್ತಿಸುತ್ತಿರುವ ವಿರೋಧ ಪಕ್ಷದ ನಾಯಕರ ರೀತಿ ನಾನಲ್ಲ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
‘ಸತ್ಯವನ್ನು ನುಡಿದಿದ್ದಕ್ಕೆ ವಿವಿಧ ಇಲಾಖೆಗಳ ಮೂಲಕ ಉತ್ತರ ಪ್ರದೇಶ ಸರ್ಕಾರ ನನಗೆ ಬೆದರಿಕೆ ಹಾಕುವ ಕಾರ್ಯದಲ್ಲಿ ತೊಡಗಿದೆ’ ಎಂದು ಆರೋಪಿಸಿದ್ದಾರೆ.
ಕಾನ್ಪುರದ ಮಕ್ಕಳ ಆಶ್ರಯ ನಿಲಯದ ಕುರಿತು ನೀಡಿರುವ ಹೇಳಿಕೆಗೆ ಮೂರು ದಿನಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಉತ್ತರ ಪ್ರದೇಶ ಮಕ್ಕಳ ಹಕ್ಕುಗಳ ಆಯೋಗ ನೋಟಿಸ್ ನೀಡಿದ ಬಳಿಕ ಪ್ರಿಯಾಂಕಾ ಈ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯ ಸರ್ಕಾರದ ಈ ನಿಲಯದಲ್ಲಿ ಇಬ್ಬರು ಬಾಲಕಿಯರು ಗರ್ಭಿಣಿಯಾಗಿರುವ ಬಗ್ಗೆ ಮಾಧ್ಯಮಗಳು ಪ್ರಕಟಿಸಿದ ವರದಿಯನ್ನು ಪ್ರಸ್ತಾಪಿಸಿ ಫೇಸ್ಬುಕ್ನಲ್ಲಿ ಉತ್ತರ ಪ್ರದೇಶದ ಸರ್ಕಾರದ ವಿರುದ್ಧ ಅವರು ಟೀಕೆ ಮಾಡಿದ್ದರು.
‘ಜನರ ಸೇವಕಿಯಾಗಿ ನನ್ನ ಕರ್ತವ್ಯ ಮಾಡುತ್ತಿದ್ದೇನೆ. ಸರ್ಕಾರ ಸತ್ಯವನ್ನು ಬಹಿರಂಗಪಡಿಸಬೇಕು. ಸುಳ್ಳು ಹೇಳಬಾರದು. ನನ್ನ ವಿರುದ್ಧ ಯಾವುದೇ ರೀತಿ ಕ್ರಮಕೈಗೊಂಡರೂ ಸತ್ಯವನ್ನೇ ಜನರ ಮುಂದಿಡುತ್ತೇನೆ’ ಎಂದು ಪ್ರಿಯಾಂಕಾ ಶುಕ್ರವಾರ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.