ADVERTISEMENT

ಟಿಎಂಸಿ ಬಿಡುವ ಪ್ರಶ್ನೆಯೇ ಇಲ್ಲ, ಮಮತಾ ಜತೆಗೆ ಇರುತ್ತೇನೆ: ಸಂಸದೆ ಶತಾಬ್ದಿ ರಾಯ್

ಪಶ್ಚಿಮ ಬಂಗಾಳದ ಬಿರ್‌ಭೂಮ್ ಸಂಸದೆ ಶತಾಬ್ದಿ ರಾಯ್

ಪಿಟಿಐ
Published 16 ಜನವರಿ 2021, 6:41 IST
Last Updated 16 ಜನವರಿ 2021, 6:41 IST
ಸಂಸದೆ ಶತಾಬ್ದಿ ರಾಯ್
ಸಂಸದೆ ಶತಾಬ್ದಿ ರಾಯ್   

ಕೋಲ್ಕತ್ತ: ‘ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ’ ಎಂದು ಹೇಳುವ ಮೂಲಕ ಶುಕ್ರವಾರ ಬೆಳಿಗ್ಗೆ ಪಕ್ಷ ತ್ಯಜಿಸುವ ಸುಳಿವು ನೀಡಿದ್ದ ತೃಣಮೂಲ ಕಾಂಗ್ರೆಸ್‌ ಪಕ್ಷದ ಬಿರ್‌ಭೂಮ್ ಕ್ಷೇತ್ರದ ಸಂಸದೆ ಶತಾಬ್ದಿ ರಾಯ್ ಸಂಜೆ ವೇಳೆಗೆ ‘ಯಾವುದೇ ಕಾರಣಕ್ಕೂ ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ‘ ಎಂದು ಸ್ಪಷ್ಟಪಡಿಸಿದ್ದಾರೆ.

ಪಕ್ಷದೊಳಗಿನ ಬೆಳವಣಿಗೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ‘ಶೀಘ್ರದಲ್ಲೇ ತನ್ನ ರಾಜಕೀಯ ನಿರ್ಧಾರ ಪ್ರಕಟಿಸುವುದಾಗಿ’ ಫೇಸ್‌ಬುಕ್‌ ಮೂಲಕ ಪ್ರಕಟಿಸಿದ್ದ ಶತಾಬ್ದಿ ಅವರೊಂದಿಗೆ ಪಕ್ಷದ ಹಿರಿಯ ಮುಖಂಡ ಅಭಿಷೇಕ್ ಬ್ಯಾನರ್ಜಿ ಎರಡು ಗಂಟೆಗಳ ಕಾಲ ಸಭೆ ನಡೆಸಿದರು.

ಸಭೆಯ ನಂತರ ಮಾತನಾಡಿದ ರಾಯ್, ‘ಎಲ್ಲ ಸಮಸ್ಯೆಗಳು ಬಗೆಹರಿದಿವೆ. ನಾನು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಮಮತಾ ಬ್ಯಾನರ್ಜಿಯವರೇ ನಮ್ಮ ನಾಯಕಿ’ ಎಂದು ತಿಳಿಸಿದರು.

ADVERTISEMENT

ಮಮತಾ ಬ್ಯಾನರ್ಜಿಯವರ ಕಲ್ಚರಲ್ ಬ್ರಿಗೇಡ್‌ನ ಪ್ರಮುಖ ಸದಸ್ಯರಲ್ಲೊಬ್ಬರಾಗಿದ್ದ ಶತಾಬ್ದಿರಾಯ್ ಅವರು, ‘ನನ್ನ ಕ್ಷೇತ್ರದಲ್ಲಿ ನಡೆಯುವ ಪಕ್ಷದ ಕಾರ್ಯಕ್ರಮಗಳ ಬಗ್ಗೆ ತನಗೆ ಮಾಹಿತಿ ನೀಡುವುದಿಲ್ಲ. ಇದರಿಂದ ನನಗೆ ಬಹಳ ಬೇಸರವಾಗಿದೆ. ಹಾಗಾಗಿ ನಾನು ಪ್ರಮುಖ ನಿರ್ಧಾರ ಕೈಗೊಳ್ಳುತ್ತಿದ್ದೇನೆ. ಅದನ್ನು ಶನಿವಾರ 2 ಗಂಟೆಯೊಳಗೆ ತಿಳಿಸುತ್ತೇನೆ‘ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.