ADVERTISEMENT

ಮಹಾರಾಷ್ಟ್ರ ಸರ್ಕಾರದ ಒಂದೊಂದೆ ಪ್ರಕರಣ ಬಯಲಿಗೆಳೆಯುತ್ತೇನೆ: ಕೇಂದ್ರ ಸಚಿವ ರಾಣೆ

ಪಿಟಿಐ
Published 27 ಆಗಸ್ಟ್ 2021, 11:25 IST
Last Updated 27 ಆಗಸ್ಟ್ 2021, 11:25 IST
ನಾರಾಯಣ ರಾಣೆ
ನಾರಾಯಣ ರಾಣೆ   

ಮುಂಬೈ : ಮಹಾರಾಷ್ಟ್ರದ ಮೈತ್ರಿ ಸರ್ಕಾರದ ನೇತೃತ್ವವನ್ನು ವಹಿಸಿರುವ ಶಿವಸೇನೆಯ ವಿರುದ್ಧ ಸಂಘರ್ಷಕ್ಕೆ ಮುಂದಾಗಿರುವ ಕೇಂದ್ರ ಸಚಿವ, ಬಿಜೆಪಿಯ ನಾರಾಯಣ ರಾಣೆ ಅವರು, ‘ನನಗೆ ಸಾಕಷ್ಟು ಪ್ರಕರಣಗಳು ತಿಳಿದಿವೆ. ಹಂತ ಹಂತವಾಗಿ ಅವುಗಳನ್ನು ಬಯಲಿಗೆ ಎಳೆಯುತ್ತೇನೆ’ ಎಂದು ಎಚ್ಚರಿಸಿದ್ದಾರೆ.

ಯಾವುದೇ ಮುಖಂಡನ ಹೆಸರು ಉಲ್ಲೇಖಿಸದ ಅವರು, ‘ಸಹೋದರನ ಪತ್ನಿಯ ಮೇಲೆ ಆ್ಯಸಿಡ್‌ ಎರಚಲು ಹೇಳಿದ್ದು ಯಾರು ಎಂಬುದು ನನಗೆ ಗೊತ್ತಿದೆ’ ಎಂದು ಹೇಳಿದರು.

ರತ್ನಾಗಿರಿ ಜಿಲ್ಲೆಯಲ್ಲಿ ಜನಾಶೀರ್ವಾದ ಯಾತ್ರೆಯಲ್ಲಿ ಮಾತನಾಡುವಾಗ ಅವರು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ವಿರುದ್ಧ ಬಳಸಿದ್ದ ಮಾತು ವಿವಾದ ಸೃಷ್ಟಿಸಿತ್ತು.ನಂತರ, ರಾಣೆ ಅವರನ್ನು ಪೊಲೀಸರು ಬಂಧಿಸಿದ್ದರು. ಈ ಬೆಳವಣಿಗೆಯು ಈಗ ರಾಣೆ ಮತ್ತು ಶಿವಸೇನೆ ನಡುವಣ ಸಂಘರ್ಷಕ್ಕೆ ನಾಂದಿಯಾಗಿದೆ.

ADVERTISEMENT

‘ಅವರ ಜೊತೆಗೆ ನಾನು 39 ವರ್ಷ ಕೆಲಸ ಮಾಡಿದ್ದೇನೆ. ನನಗೆ ಸಾಕಷ್ಟು ವಿಷಯಗಳು ತಿಳಿದಿವೆ. ಸ್ವಂತ ಸಹೋದರನ ಪತ್ನಿ ಮೇಲೆ ಆ್ಯಸಿಡ್‌ ಎರಚಲು ಹೇಳಿದ್ದು ಯಾರು ಎಂಬುದು ತಿಳಿಸಿದೆ. ಇದೆಂಥ ಸಂಸ್ಕಾರ’ ಎಂದು ರಾಣೆ ಶುಕ್ರವಾರ ಪ್ರಶ್ನಿಸಿದರು.

ಮುಖ್ಯಮಂತ್ರಿ ವಿರುದ್ಧ ಹರಿಹಾಯ್ದ ಅವರು, ಕೇಂದ್ರ ಸಚಿವರನ್ನು ಬಂಧಿಸಿ ಏನು ಸಾಧಿಸಿದಿರಿ? ಒಂದೊಂದಾಗಿ ಪ್ರಕರಣ ಹೊರಗೆಳೆಯುತ್ತೇನೆ‘ ಎಂದರು. ‘ನಿನ್ನೆ ಶಿವಸೇನೆಯ ಹುಡುಗ ವರುಣ್‌ ಸರ್ದೇಸಾಯಿ ಮುಂಬೈನ ನನ್ನ ಮನೆ ಬಳಿಗೆ ಬಂದಿದ್ದ. ಮತ್ತೊಮ್ಮೆ ಬಂದರೆ ವಾಪಸು ಹೋಗುವುದಿಲ್ಲ’ ಎಂದು ರಾಣೆ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.