ಗುವಾಹಟಿ: ಅಸ್ಸಾಂನಲ್ಲಿರುವ ನನ್ನ ಜನರಿಗಾಗಿ ನಾನು ಶಸ್ತ್ರಾಸ್ತ್ರ ಹಿಡಿದೆ ಎಂದು ಅಸ್ಸಾಂನ ದಿಬ್ರುಗಡ ಜಿಲ್ಲೆಯ ಮೊರಾನ್ ನಿವಾಸಿಯಾಗಿರುವ ಅಭಿಜಿತ್ ಗೊಗೊಯಿ ಹೇಳಿಕೊಂಡಿದ್ದಾನೆ.
‘ನಾನೀಗ ಎಲ್ಲವನ್ನೂ ತ್ಯಜಿಸಿದ್ದು, ಕ್ರಾಂತಿಕಾರದ ಬದಲಾವಣೆಗೆ ಹೋರಾಟ ನಡೆಸಲು ಮುಂದಾಗಿದ್ದೇನೆ. ಅಸ್ಸಾಂ ಜನರ ಅಸ್ತಿತ್ವಕ್ಕಾಗಿ ಹೋರಾಟ ನಡೆಸುವ ಪರಿಸ್ಥಿತಿ ಇದೆ’ ಎಂದು ಆತ ಹೇಳಿಕೊಂಡಿದ್ದಾನೆ.
ಸೇನಾ ಸಮವಸ್ತ್ರ ಧರಿಸಿರುವ ಅಭಿಜಿತ್, ಒಂದು ಹೆಗಲ ಮೇಲೆ ಎಕೆ–47 ಬಂದೂಕು, ಮತ್ತೊಂದು ಹೆಗಲ ಮೇಲೆ ವಾಕಿಟಾಕಿ ಹಾಕಿಕೊಂಡಿರುವ ದೃಶ್ಯಗಳು 3.59 ನಿಮಿಷದ ವಿಡಿಯೊದಲ್ಲಿ ಸೆರೆಯಾಗಿವೆ.
ಶಸ್ತ್ರಾಸ್ತ್ರ ಹಿಡಿಯಲು ಕಾರಣ ಏನು?: ‘ಕೇಂದ್ರ ಪೌರತ್ವ ತಿದ್ದುಪಡಿ ಮಸೂದೆ–2016’ ಜಾರಿಗೆ ಬಂದರೆ ಅಸ್ಸಾಂ ನಾಗರಿಕರು ಗಂಭೀರ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಅವರ ಅಸ್ತಿತ್ವಕ್ಕೆ ಪೆಟ್ಟು ಬೀಳುತ್ತದೆ. ಹಾಗಾಗಿ ಮಸೂದೆ ವಿರುದ್ಧ ಹೋರಾಡಲು ಉಲ್ಫಾ ಗುಂಪು ಸೇರುತ್ತಿದ್ದೇನೆ’ ಎಂದು ಅಭಿಜಿತ್ ಹೇಳಿಕೊಂಡಿದ್ದಾನೆ.
ಬೆಂಗಳೂರಿನ ಬಿಸಿನೆಸ್ ಸ್ಕೂಲ್ ಆ್ಯಂಡ್ ಮ್ಯಾನೇಜ್ಮೆಂಟ್ ಸಂಸ್ಥೆಯಿಂದ ಎಂಬಿಎ ಪದವಿ ಪಡೆದಿದ್ದಾಗಿ ತಿಳಿಸಿದ್ದಾನೆ.
‘ಸಿಂಗಾಪುರ, ಆಸ್ಟ್ರೇಲಿಯಾ ಮತ್ತು ಮಲೇಷ್ಯಾದಲ್ಲಿ ಕೆಲಸ ನಿರ್ವಹಿಸಿದೆ. ಅಲ್ಲಿಂದ ಬೆಂಗಳೂರಿಗೆ ಹಿಂದಿರುಗಿ ಐಟಿ ಕಂಪನಿ ಸೇರಿದೆ. ಹಿರಿಯ ಸಾಫ್ಟವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೆ’ ಎಂದು ವಿಡಿಯೊದಲ್ಲಿ ಹೇಳಿದ್ದಾನೆ.
**
ಉಲ್ಫಾ ಉಗ್ರರ ಗಾಳಕ್ಕೆ ಯುವಕರು
ಎನ್ಡಿಎ ಸರ್ಕಾರದ ನಾಗರಿಕ (ತಿದ್ದುಪಡಿ) ಮಸೂದೆ–2016ರ ವಿರುದ್ಧ ಅಸ್ಸಾಂ ಯುವಕರು ಹೋರಾಟಕ್ಕೆ ಮುಂದಾಗಿದ್ದಾರೆ.
ಒಂದು ವೇಳೆ ಮಸೂದೆ ಜಾರಿಯಾದರೆ ತಾವು ಅಲ್ಪಸಂಖ್ಯಾತರಾಗಬಹುದು ಎಂಬ ಆತಂಕ ಸ್ಥಳೀಯರನ್ನು ಕಾಡುತ್ತಿದೆ. ಆದ್ದರಿಂದ ಯುವಕರು ಉಲ್ಫಾ ಉಗ್ರರ ಸಂಘಟನೆ ಸೇರುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.