ADVERTISEMENT

ಸಿದ್ಧತೆ ಗರಿಷ್ಠ ಮಟ್ಟದಲ್ಲಿಡಲು ವಾಯುಪಡೆ ಮುಖ್ಯಸ್ಥರ ಸೂಚನೆ

ಪಿಟಿಐ
Published 25 ಜೂನ್ 2021, 19:46 IST
Last Updated 25 ಜೂನ್ 2021, 19:46 IST
ಭದೌರಿಯಾ
ಭದೌರಿಯಾ   

ನವದೆಹಲಿ: ಪೂರ್ವ ಲಡಾಖ್‌ ಗಡಿಯಲ್ಲಿ ಚೀನಾದ ಸೇನೆಯ ಜತೆಗೆ ನಡೆದ ಸಂಘರ್ಷದ ಸಂದರ್ಭದಲ್ಲಿ ಪಶ್ಚಿಮ ಏರ್‌ ಕಮಾಂಡ್‌ (ಡಬ್ಲ್ಯುಎಸಿ) ಪ್ರದರ್ಶಿಸಿದ ಕ್ಷಿಪ್ರ ಪ್ರತಿಕ್ರಿಯೆಯನ್ನು ಸೇನಾಪಡೆಯ ಚೀಫ್‌ ಮಾರ್ಷಲ್‌ ಆರ್‌.ಎಸ್‌.ಕೆ. ಭದೌರಿಯಾ ಶ್ಲಾಘಿಸಿದ್ದಾರೆ. ಜತೆಗೆ ಕಾರ್ಯಾಚರಣೆಯ ಸಿದ್ಧತೆಯನ್ನು ಉನ್ನತಮಟ್ಟದಲ್ಲಿ ಇರಿಸುವಂತೆ ಸಲಹೆ ನೀಡಿದ್ದಾರೆ.

ಉತ್ತರ ಭಾರತದಲ್ಲಿ ಭಾರತದ ವಾಯುಪ್ರದೇಶದ ಸುರಕ್ಷತೆಯನ್ನು ನೋಡಿಕೊಳ್ಳುವ ಡಬ್ಲ್ಯುಎಸಿಯ ಉನ್ನತ ಮಟ್ಟದ ಕಮಾಂಡರ್‌ಗಳ ಎರಡು ದಿನಗಳ ಸಮಾವೇಶದಲ್ಲಿ ಅವರು ಮಾತನಾಡಿದರು. ಉತ್ತರ ಗಡಿ ಪ್ರದೇಶದ ಎಲ್ಲಾ ಸವಾಲುಗಳ ಬಗ್ಗೆ ಕಮಾಂಡರ್‌ಗಳು ವಾಯುಪಡೆಯ ಮುಖ್ಯಸ್ಥರಿಗೆ ಮಾಹಿತಿ ನೀಡಿದರು.

‘ಎದುರಾಗುತ್ತಿರುವ ಭದ್ರತಾ ಸವಾಲುಗಳನ್ನು ಸರಿಯಾಗಿ ವಿಶ್ಲೇಷಿಸಬೇಕು. ಶಸ್ತ್ರಾಸ್ತ್ರ ವ್ಯವಸ್ಥೆ ಹಾಗೂ ಇತರ ಎಲ್ಲಾ ವೇದಿಕೆಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಬೇಕು. ಭೌತಿಕ ಮತ್ತು ಸೈಬರ್‌ ಸುರಕ್ಷತೆಯತ್ತ ಗರಿಷ್ಠ ಗಮನ ಹರಿಸಬೇಕು’ ಎಂದು ಭದೌರಿಯಾ ಸಲಹೆ ನೀಡಿದರು.

ADVERTISEMENT

ಕಳೆದ ವರ್ಷ ಪೂರ್ವ ಲಡಾಖ್‌ನಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದ್ದರಿಂದ ಭಾರತೀಯ ವಾಯುಪಡೆಯು ತನ್ನ ಮುಂಚೂಣಿಯ ಯುದ್ಧ ವಿಮಾನಗಳು ಹಾಗೂ ದಾಳಿ ಹೆಲಿಕಾಪ್ಟರ್‌ಗಳನ್ನು ಲಡಾಖ್‌ನ ವಿಮಾನ ನಿಲ್ದಾಣದಲ್ಲಿ ಹಾಗೂ ವಾಸ್ತವ ಗಡಿ ರೇಖೆಯುದ್ದಕ್ಕೂ ಸನ್ನದ್ಧ ಸ್ಥಿತಿಯಲ್ಲಿ ಇರಿಸಿತ್ತು. ಸೆಪ್ಟೆಂಬರ್‌ ಬಳಿಕ ರಫೇಲ್‌ ಯುದ್ಧ ವಿಮಾನಗಳೂ ವಿವಿಧ ಮುಂಚೂಣಿ ಪ್ರದೇಶಗಳಿಗೆ ಹೋಗಿ ಬರುತ್ತಾ, ಭಾರತದ ಯುದ್ಧ ಸಿದ್ಧತೆಗೆ ಬಲತುಂಬಿವೆ.

ಡಬ್ಲ್ಯುಎಸಿಯ ವಾಯುಪ್ರದೇಶ ಭದ್ರತಾ ದಾಖಲೆಗಳ ಬಗ್ಗೆಯೂ ಭದೌರಿಯಾ ಶ್ಲಾಘನೆ ವ್ಯಕ್ತಪಡಿಸಿ, ಸುರಕ್ಷಿತ ಕಾರ್ಯಾಚರಣೆ ವಾತಾವರಣವನ್ನು ಮುಂದುವರಿಸುವಂತೆ ಸಲಹೆ ನೀಡಿದರು. ಸ್ವಾವಲಂಬನೆ, ದೇಶೀಯ ಉತ್ಪಾದನೆ ಹಾಗೂ ಕಾರ್ಯಾಚರಣೆ ಸಾಮರ್ಥ್ಯ ಹೆಚ್ಚಿಸುವ ಮೂಲಕ ಭಾರತದ ವಾಯುಪಡೆಯನ್ನು ಪ್ರಬಲ ಶಕ್ತಿಯಾಗಿಸಬೇಕು ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.