ADVERTISEMENT

ಓವೈಸಿ ಉತ್ತರ ಪ್ರದೇಶದ ಮತದಾರರಾದರೆ, ಸಿಎಂ ಆಗುತ್ತಾರೆ: ಎಸ್‌ಬಿಎಸ್‌ಪಿ ಮುಖ್ಯಸ್ಥ

ಪಿಟಿಐ
Published 3 ಜುಲೈ 2021, 12:52 IST
Last Updated 3 ಜುಲೈ 2021, 12:52 IST
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ   

ಬಲಿಯಾ/ಬರೇಲಿ: ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಉತ್ತರ ಪ್ರದೇಶದ ಮತದಾರರಾದರೆ, ಬಳಿಕ ಅವರು ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ ಎಂದು ಸುಹೇಲ್‌ದೇವ್ ಭಾರತೀಯ ಸಮಾಜ ಪಾರ್ಟಿ ಅಧ್ಯಕ್ಷ ಓಂ ಪ್ರಕಾಶ್ ರಾಜ್‌ಭರ್ ಹೇಳಿದ್ದಾರೆ.

2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಆಲ್ ಇಂಡಿಯಾ ಮಜಿಲಿಸ್-ಇ-ಇತ್ಹೇದುಲ್‌ ಮುಸ್ಲೀಮೀನ್ (ಎಐಎಂಐಎಂ) ಮತ್ತು ರಾಜ್‌ಭರ್ ಅವರ ಎಸ್‌ಬಿಎಸ್‌ಪಿ ಮೈತ್ರಿ ಮಾಡಿಕೊಂಡಿವೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೆಸರೇಳದೆಯೇ ವಾಗ್ದಾಳಿ ನಡೆಸಿದ ಅವರು, 'ವ್ಯಕ್ತಿಯೊಬ್ಬರು ಬುದ್ಧಿವಂತರೆಂದು ಸಾಬೀತಾಯಿತು ಮತ್ತು ಅವರು ಉತ್ತರಾಖಂಡ ರಾಜ್ಯದಿಂದ ಬಂದವರು, ಉತ್ತರ ಪ್ರದೇಶದ ಮತದಾರರಾದರು ಮತ್ತು ಬಳಿಕ ಆ ರಾಜ್ಯದ ಮುಖ್ಯಮಂತ್ರಿಯಾದರು' ಎಂದು ರಾಜ್‌ಭರ್ ಹೇಳಿದ್ದಾರೆ.

ADVERTISEMENT

ಬಲಿಯಾದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮುಸ್ಲಿಮರು ರಾಜ್ಯದ ಜನಸಂಖ್ಯೆಯ ಶೇ 20 ರಷ್ಟಿದ್ದಾರೆ. ತಮ್ಮ ಜನಸಂಖ್ಯೆಗೆ ಅನುಗುಣವಾಗಿ ಅವರ ಪ್ರಾತಿನಿಧ್ಯ ಸರ್ಕಾರದಲ್ಲಿರಬೇಕು. ಇದು ಅವರ ಹಕ್ಕು' ಎಂದು ಪ್ರತಿಪಾದಿಸಿದರು.

'ಮುಸ್ಲಿಮರ ಮಗನೊಬ್ಬ ಏಕೆ ರಾಜ್ಯದ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ? ಮುಸ್ಲಿಂ ಆಗಿರುವುದೇ ಅಪರಾಧವೇ? ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ರಚಿಸಲು ಬಿಜೆಪಿ, ಯಾವಾಗಲೂ ಪ್ರತ್ಯೇಕತಾವಾದ ಮತ್ತು ಪಾಕಿಸ್ತಾನದ ಬಗ್ಗೆ ಮಾತನಾಡುವ ಮೆಹಬೂಬಾ ಮುಫ್ತಿ ಅವರೊಂದಿಗೆ ಮೈತ್ರಿ ಮಾಡಿಕೊಂಡಿತ್ತು' ಎಂದು ರಾಜ್‌ಭರ್ ಹೇಳಿದರು.

2022ರ ವಿಧಾನಸಭಾ ಚುನಾವಣೆಯಲ್ಲಿ ಆದಿತ್ಯನಾಥ್ ಅವರೇ ರಾಜ್ಯದಲ್ಲಿ ಮತ್ತೆ ಸರ್ಕಾರ ರಚಿಸಲಿದ್ದಾರೆ ಎಂದು ಶನಿವಾರ ಬರೇಲಿಯಲ್ಲಿ ಕೇಂದ್ರ ಪಶುಸಂಗೋಪನಾ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.

'ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮತ್ತು ಎಸ್‌ಬಿಎಸ್‌ಪಿ ಮುಖ್ಯಸ್ಥ ಓಂ ಪ್ರಕಾಶ್ ರಾಜ್‌ಭರ್ ಅವರು 'ಮುಂಗೇರಿಲಾಲ್' ನಂತೆ ಹಗಲುಗನಸು ಕಾಣುತ್ತಿದ್ದಾರೆ. ಓವೈಸಿ ದೇಶದ ಸಾಮಾಜಿಕ ಸಾಮರಸ್ಯವನ್ನು ಕೆಡಿಸಲು ಬಯಸುತ್ತಾರೆ ಮತ್ತು ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ. ಯೋಗಿ ಆದಿತ್ಯನಾಥ್ ಅವರು ರಾಜ್ಯದಲ್ಲಿ ಸರ್ಕಾರ ರಚಿಸಲಿದ್ದಾರೆ' ಎಂದು ಬರೇಲಿಯ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.